ಮಂಗಳೂರು: ಅಪ್ಪ ಬಿಸಾಡಿದ ಬೀಡಿ ತುಂಡು ನುಂಗಿದ 10 ತಿಂಗಳ ಮಗು ಅಸುನೀಗಿದ ಘಟನೆ ಮಂಗಳೂರಿನ ಅಡ್ಯಾರ್ ಪ್ರದೇಶದಲ್ಲಿ ನಡೆದಿದೆ.
ಬಿಹಾರ ಮೂಲದ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರ ಮಗುವಾದ ಅನೀಶ್ ಕುಮಾರ್ (10 ತಿಂಗಳು) ಮೃತಪಟ್ಟ ಮಗುವಾಗಿದೆ. ಮನೆಯೊಳಗೆ ಅಪ್ಪ ಬೀಡಿ ಸೇದ ನಂತರ ಉಳಿದ ತುಂಡನ್ನು ಎಸೆಯಲಾಗಿತ್ತು. ಅದು ಮಗುವಿಗೆ ಆಟದ ವಸ್ತುವಾಗಿ, ಮಗು ಆ ತುಂಡು ನುಂಗಿದ ಪರಿಣಾಮ ಅಸ್ವಸ್ಥಗೊಂಡಿದೆ.
ಅಸೌಖ್ಯ ಕಾಣಿಸಿದ ಮಗುವನ್ನು ತಕ್ಷಣವೇ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಮಗುವಿನ ತಾಯಿ ಲಕ್ಷ್ಮಿದೇವಿ, ಪತಿ ನಿರ್ಲಕ್ಷ್ಯದಿಂದಲೇ ಮಗುವಿನ ಪ್ರಾಣ ಹೋಗಿದೆ ಎಂದು ಪತ್ನಿಯೇ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
“ಇದಕ್ಕೂ ಮುನ್ನ ಅನೇಕ ಬಾರಿ ಮನೆ ಒಳಗೆ ಬೀಡಿ ತುಂಡು ಬಿಸಾಡಬಾರದು ಎಂದು ಹೇಳಿದ್ದೆ. ಆದರೆ ನನ್ನ ಪತಿ ಗಮನ ನೀಡಲಿಲ್ಲ. ಈ ನಿರ್ಲಕ್ಷ್ಯದಿಂದ ನನ್ನ ಮಗುವು ಬಲಿಯಾಗಿದೆ” ಎಂದು ದೂರಿನಲ್ಲಿ ತಂದೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.