ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಎಂಸಿಸಿ ಬ್ಯಾಂಕ್ನಿಂದ ಸಾಲ ಪಡೆದ ಮನೋಹರ್ ಪಿರೇರಾ ಎಂಬವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೊ ಆಸ್ಪತ್ರೆಗೆ ದಾಖಲಾಗಿದ್ದು, ಇವರ ಅನಾರೋಗ್ಯದ ಬಗ್ಗೆ ಅನುಮಾನವಿದ್ದು ಆಸ್ಪತ್ರೆಯವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ, ಬ್ಯಾಂಕ್ ಸದಸ್ಯ ರೋಬರ್ಟ್ ರೋಸಾರಿಯೋ ಆಗ್ರಹಿಸಿದ್ದಾರೆ.
ಮಂಗಳೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅನಿಲ್ ಲೋಬೊ ಅವರು ಬಂಧನವಾದ ಬಳಿಕ ಜೈಲಿಗೆ ಹೋಗದೆ ಅನಾರೋಗ್ಯ ಕಾರಣ ನೀಡಿ 13 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿಲ್ ಲೋಬೊ ಅವರು ನ್ಯಾಯಾಲಯಕ್ಕೆ ನೀಡಿದ ದಾಖಲೆಯಲ್ಲಿ ಸಣ್ಣ ಸರ್ಜರಿ ಎಂದು ಉಲ್ಲೇಖಿಸಲಾಗಿದ್ದು, ಯಾವುದೇ ಪ್ರಾಣಾಪಾಯ ರೋಗದ ಉಲ್ಲೇಖವಿಲ್ಲ. ಜೈಲಿನಲ್ಲಿರಬೇಕಾದ ವ್ಯಕ್ತಿ ಆಸ್ಪತ್ರೆಯಲ್ಲಿ ದಿನದೂಡುತ್ತಿದ್ದು, ಕೂಡಲೇ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಆಸ್ಪತ್ರೆಯವರು ಆಡಳಿತವರು ಬುಲೆಟಿನ್ ಬಿಡುಗಡೆ ಮಾಡಿ, ಅವರಿಗಿರುವ ರೋಗ ಯಾವುದು? ಅವರಿಗೆ ಆಸ್ಪತ್ರೆಯಲ್ಲಿ ಇನ್ನೆಷ್ಟು ದಿನ ಚಿಕಿತ್ಸೆ ನೀಡಬೇಕು? ಎಂಬ ಬಗ್ಗೆ ಬುಲೆಟಿನ್ ಮಾಡಬೇಕು ಎಂದರು.