ಬೆಂಗಳೂರು: ಮಾ.20ರಂದು ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಾರ್ಚ್ 19ರಂದು ಸಭೆ ಇದ್ದು ಅಂದೇ ತೀರ್ಮಾನಿಸುತ್ತೇವೆ. ಆದರೆ, ನಾವು ಮಾ.20ರಂದು ಘೋಷಣೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂದು ಭಾರತ್ ಜೋಡೋ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯುತ್ತಿದೆ. ನಾವೆಲ್ಲ ಆ ಕಾರ್ಯಕ್ರಮಕ್ಕೆ ಮುಂಬೈಗೆ ಹೋಗುತ್ತಿದ್ದೇವೆ. ಶಿವಾಜಿ ಪಾರ್ಕ್ನಲ್ಲಿ ಕಾರ್ಯಕ್ರಮ ಇದೆ. ಹೀಗಾಗಿ ಮಾ. 20ರಂದು ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಅಧ್ಯಕ್ಷರನ್ನ ಪ್ರತಿ ತಾಲೂಕಿನಲ್ಲಿ ಮಾಡಿದ್ದೇವೆ. ಅವರದೆಲ್ಲ ಒಂದು ಸಭೆ ಕರೆಯುತ್ತೇವೆ. ಮಾ. 21 ರಂದು ಸಭೆ ಕರೆಯಬೇಕು ಎಂದು ತೀರ್ಮಾನ ಮಾಡಿದ್ದೇವೆ. ಸರ್ಕಾರ ಯಾರನ್ನೆಲ್ಲ ಗ್ಯಾರಂಟಿ ಸಮಿತಿಗೆ ನೇಮಕ ಮಾಡಿದೆ ಅವರನೆಲ್ಲ ನಾವು ಇಲ್ಲಿಗೆ ಕರಿಯುತ್ತೇವೆ. ಅವರಿಗೆಲ್ಲಾ ಚುನಾವಣೆ ಜವಾಬ್ದಾರಿ ಕೊಡುತ್ತೇವೆ. ಈ ಚುನಾವಣೆಯಲ್ಲಿ ನಾಮಿನೇಶನ್ ಮಾಡುವುದು ಅಷ್ಟೆ ಅಲ್ಲಾ, ಪಕ್ಷಕ್ಕೂ ದುಡಿಯಬೇಕು.
ಕಲಬುರಗಿಯಿಂದ ಪ್ರಧಾನಿ ಮೋದಿ ಚುನಾವಣಾ ಸಭೆ ಆರಂಭ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ನಮ್ಮ ಅಪೋಜಿಷನ್ ಲೀಡರ್ ಅಂದ್ರೆ ಭಯ. ಅದಕ್ಕೊಸ್ಕರ ಅಲ್ಲಿಂದಲೇ ಪ್ರಾರಂಭ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಸೇರಿ 20 ಸೀಟ್ ಗೆಲ್ಲುತ್ತೇವೆ ಎಂದು ತಿಳಿಸಿದರು.
ಇತ್ತಿಚೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿತ್ತು. ಕರ್ನಾಟಕದ 7 ಲೋಕಸಭಾ ಕ್ಷೇತ್ರಗಳು ಸೇರಿ ಒಟ್ಟು 39 ಕ್ಷೇತ್ರಗಳಿಗೆ ಕದನ ಕಲಿಗಳನ್ನು ಘೋಷಿಸಿತ್ತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಹೆಸರು ಘೋಷಣೆ ಆಗಿದ್ರೆ. ಶಿವಮೊಗ್ಗದಿಂದ ಗೀತಾ ಶಿವರಾಜ್ಕುಮಾರ್ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇನ್ನು ಬಿಜೆಪಿ ಬಿಟ್ಟು ಘರ್ವಾಪ್ಸಿ ಮಾಡಿದ್ದ ಮುದ್ದ ಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಆಗಿದೆ.
ಇನ್ನು ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ವೆಂಕಟರಮಣೇಗೌಡ ಅಂದ್ರೆ ಸ್ಟಾರ್ ಚಂದ್ರು ಟಿಕೆಟ್ ಗಿಟ್ಟಿಸಿದ್ರೆ. ವಿಜಯಪುರದಲ್ಲಿ ರಾಜು ಅಲಗೂರಗೆ ಟಿಕೆಟ್ ನೀಡಲಾಗಿದೆ. ಇನ್ನು ಹಾವೇರಿಯಿಂದ ಆನಂದ್ ಗಡ್ಡದೇವರ ಮಠ ಸ್ಪರ್ಧೆ ಮಾಡಲಿದ್ರೆ. ಹಾಸನದಿಂದ ಶ್ರೇಯಸ್ ಪಟೇಲ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.