ವಿಶಾಖ ಎಕ್ಸ್ಪ್ರೆಸ್ ರೈಲಿನಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದ್ದು, ವಿವಾಹಿತ ಮಹಿಳೆಯ ಮೇಲೆ ಕಾಮಾಂಧನೊಬ್ಬ ಅತ್ಯಾಚಾರ ಎಸಗಿರುವ ಘೊರ ಕೃತ್ಯ ನಡೆದಿದೆ.
ವಿಶಾಖ ಎಕ್ಸ್ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿದ ಕಾಮಿಯೊಬ್ಬ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.
ಪಲ್ನಾಡು ಜಿಲ್ಲೆಯ ರೆಂಟಚಿಂತಲ ಮೂಲದ ಮಹಿಳೆಯ ಮೇಲೆ ಈ ದೌರ್ಜನ್ಯ ನಡೆದಿದೆ. ರೆಂಟಚಿಂತಲದ ದಂಪತಿ ಜೀವನೋಪಾಯಕ್ಕಾಗಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಅಲ್ಲಿ ಪತಿ ಆಟೋ ಓಡಿಸುತ್ತಾ ಜೀವನ ಮಾಡುತ್ತಿದ್ದರು. ಈ ನಡುವೆ, ರೆಂಟಚಿಂತಲ ಮಂಡಲದ ಜೆಟ್ಟಿಪಾಲೆಂನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದಂಪತಿ ಭಾನುವಾರ ವಿಶಾಖ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.
ರೈಲು ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದಾಗ, ಎಸಿ ಬೋಗಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ರೈಲಿನಲ್ಲಿ ಜಾಗ ಖಾಲಿ ಇದೆ ಎಂದು ಹೇಳಿ ಮಹಿಳೆಯನ್ನು ನಂಬಿಸಿ ಕರೆದೊಯ್ದಿದ್ದಾನೆ. ಪತಿ ಎಸಿ ಬೋಗಿಯ ಶೌಚಾಲಯದ ಬಳಿ ಕುಳಿತಿದ್ದರೆ, ಪತ್ನಿ H1A ಬೋಗಿಯ ಕೂಪೆಯೊಳಗೆ ಹೋಗಿದ್ದಾಳೆ. ಕೂಡಲೇ ಆ ಅಪರಿಚಿತ ವ್ಯಕ್ತಿ ಬೋಗಿಯ ಬಾಗಿಲು ಹಾಕಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ನಡೆದ ವಿಷಯವನ್ನು ಮಹಿಳೆಯು ಪತಿಗೆ ಕೂಡಲೇ ತಿಳಿಸುವ ಬದಲು ಸುಮ್ಮನಾಗಿದ್ದಾಳೆ. ರೈಲು ನಡಿಕುಡಿ ನಿಲ್ದಾಣ ತಲುಪಿ ಅಲ್ಲಿಂದ ಕೆಳಗಿಳಿದ ನಂತರ ಆಕೆ ಪತಿಗೆ ಅಸಲಿ ವಿಷಯ ತಿಳಿಸಿದ್ದಾಳೆ. ತಕ್ಷಣವೇ ರೆಂಟಚಿಂತಲ ತಲುಪಿದ ಸಂತ್ರಸ್ತೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ‘ಶೂನ್ಯ ಎಫ್ಐಆರ್’ (Zero FIR) ದಾಖಲಿಸಿಕೊಂಡು, ಪ್ರಕರಣದ ಮಾಹಿತಿಯನ್ನು ವಿಜಯವಾಡ ರೈಲ್ವೆ ಪೊಲೀಸರಿಗೆ ರವಾನಿಸಿದ್ದಾರೆ.



