ಪಿರಿಯಾಪಟ್ಟಣ: ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಬೋಧನೆಗಳನ್ನು ಅರಿತುಕೊಂಡವರು ಜೀವನ ಮೌಲ್ಯ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ ಎಂದು ಡಿಟಿಎಂಎನ್ ವಿದ್ಯಾಸಂಸ್ಥೆ ಖಜಾಂಚಿ ಪಿ.ರವಿ ತಿಳಿಸಿದರು.
ತಾಲೂಕಿನ ಬೆಟ್ಟದಪುರ ಗ್ರಾಮದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅಂಗವಾಗಿ ನಡೆದ ಪುಟಾಣಿಗಳ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸಂಸ್ಥೆಯ ವತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುವ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆ ಸಾರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ನಟರಾಜ್ ಅವರು ಮಾತನಾಡಿ ಜೀವನದಲ್ಲಿ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿದ್ದಾರೆ. ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಗವಂತ ಶ್ರೀ ಕೃಷ್ಣನ ಆದರ್ಶಗಳು ನಮಗೆ ಮಾರ್ಗದರ್ಶನವಾಗಬೇಕಿದೆ, ಸಂಭವಾಮಿ ಯುಗೇ ಯುಗೇ ಎಂಬ ಮಾತಿನಂತೆ ಎಲ್ಲಿ ಅಧರ್ಮ ಅನೀತಿ ತಂಡವವಾಡುತ್ತದೆಯೋ ಅಲ್ಲಿ ಧರ್ಮ ಸಂಸ್ಥಾಪನೆ ಮಾಡಲು ನಾನು ಮತ್ತೆ ಮತ್ತೆ ಅವತರಿಸುತ್ತೇನೆ ಎಂಬ ಸಾರಾಂಶವಿದೆ, ಸ್ಪರ್ಧೆಯಲ್ಲಿ ವಿಶೇಷವಾಗಿ ಮುಸ್ಲಿಂ ಜನಾಂಗದವರು ಸೇರಿದಂತೆ ಸರ್ವಧರ್ಮೀಯರು ಭಾಗವಹಿಸಿರುವುದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ಹೆಮ್ಮೆಯ ವಿಷಯವಾಗಿದೆ ಎಂದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಶ್ರೀ ಕೃಷ್ಣನ ಸ್ವಾಗತ ಗೀತೆ ಹಾಗೂ ಭಗವದ್ಗೀತೆಯ ಶ್ಲೋಕ ಮತ್ತು ವಿದ್ಯಾರ್ಥಿಗಳ ಛದ್ಮವೇಶ ಸ್ಪರ್ಧೆ ಗಮನ ಸೆಳೆಯಿತು. ತೀರ್ಪುಗಾರರಾಗಿ ಪದವಿ ಪೂರ್ವ ಕಾಲೇಜು ವಿಭಾಗದ ಪವಿತ್ರ, ಅರ್ಚನಾ ಕಾರ್ಯನಿರ್ವಹಿಸಿದರು, ಎಲ್ ಕೆಜಿ ವಿಭಾಗದಲ್ಲಿ ರಿಥಿಕ್ ಗೌಡ ಪ್ರಥಮ, ಚೇತಸ್ವಿ ದ್ವಿತೀಯ, ಅರ್ಸಲಾನ್ ಅಹಮದ್ ಮತ್ತು ದನ್ವಿತ್ ತೃತೀಯ, ಯುಕೆಜಿ ವಿಭಾಗದಲ್ಲಿ ಗೌತಮಿ ಪ್ರಥಮ, ಲಕ್ಷ ದ್ವಿತೀಯ, ದಲಿಯ ಶೆಟ್ಟಿ ತೃತೀಯ, ಒಂದನೇ ತರಗತಿ ವಿಭಾಗದಲ್ಲಿ ಜೈನಬ್ ಫಾತಿಮಾ ಪ್ರಥಮ, ಡಿ.ಹಿಮಾ ದ್ವಿತೀಯ, ಮೊಹಮ್ಮದ್ ಅಸಾದ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಈ ಸಂದರ್ಭ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಸಂಸ್ಥೆಯ ಖಜಾಂಚಿ ಪಿ.ರವಿ ಅವರ ಪತ್ನಿ ಭಾನು, ನಿರ್ದೇಶಕ ವಿಜಯ್ ಕುಮಾರ್, ಪ್ರಾಂಶುಪಾಲ ಸತೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಮುರಳಿ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜರಿನಾ ಖಾನಮ್, ಗ್ರಂಥಪಾಲಕ ಪುಟ್ಟರಾಜು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಪೋಷಕರು ವಿದ್ಯಾರ್ಥಿಗಳು ಇದ್ದರು.