ಕೆ.ಆರ್.ನಗರ: ಶಿವಮೊಗ್ಗದಲ್ಲಿ ನ.05 ರಂದು ಅನುದಾನಿತ ನೌಕರರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಅನುದಾನಿತ ನೌಕರರು ಭಾಗವಹಿಸುವಂತೆ ಮೈಸೂರು ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಟಿ.ಪಿ.ನಂದೀಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನುದಾನಿತ ಶಾಲಾ ನೌಕರರಿಗೆ ಮಾರಕವಾಗಿರುವ ಪಿಂಚಣಿ ನಿಯಂತ್ರಣ ಕಾಯ್ದೆ 2014ನ್ನು ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಜಾರಿಗೆ ಒತ್ತಾಯಿಸಿ ನ.5ರಂದು ಶಿವಮೊಗ್ಗದಲ್ಲಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ
ಕರ್ನಾಟಕದಲ್ಲಿ ಸರ್ಕಾರಿ ಮತ್ತು ಅನುದಾನಿತ ನೌಕರರಿಗೆ 31.03.2006ರ ಹಿಂದೆ ನಿವೃತ್ತಿಯ ನಂತರ ನಿವೃತ್ತಿ ಭತ್ಯೆ ಇತ್ಯಾಧಿ ಸೌಲಭ್ಯಗಳನ್ನು ಸಮಾನವಾಗಿ ಕೊಡಲಾಗುತ್ತಿದ್ದು ಆ ನಂತರ ಏಪ್ರಿಲ್ 2006 ರಿಂದ ಅಂದಿನ ಸರ್ಕಾರ ಸರ್ಕಾರಿ ನೌಕರರಿಗೆ ರಾಷ್ಟಿಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದು ಅನುದಾನಿತ ನೌಕರರನ್ನು ಪಿಂಚಣಿ ಸೌಲಭ್ಯದಿಂದ ಕೈ ಬೀಡಲಾಯಿತು.
ಸರ್ಕಾರವು ಅನುದಾನಿತ ಶಾಲಾ ಸಿಬ್ಬಂದಿಗಳ ಸೇವಾ ಮತ್ತು ಪಿಂಚಣಿ ಸೌಲಭ್ಯವನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ2014ನ್ನು ಜಾರಿಗೊಳಿಸಿದೆ ನೌಕರರು ಈ ವಿದೇಯಕವನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿಗೆ ತೀರ್ಪು ನೀಡಿ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ 2014ನ್ನು ಸಂವಿಧಾನದ ಪರಿಚ್ಛೇಧ 14ರ ವಿರುದ್ಧವಾಗಿದೆ ಎಂದು ವಿಧೇಯಕವನ್ನು ವಜಾಗೊಳಿಸಿರುತ್ತದೆ ಎಂದು ಹೇಳಿದ್ದಾರೆ.
ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ರಿಟ್ ಅರ್ಜಿ ದಾಖಲಿಸಿದ್ದ ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿರುತ್ತದೆ. ಈಗ ಸರ್ಕಾರವು ಇದನ್ನು ವಾಪಸ್ ಪಡೆದು ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕು. ಅನುದಾನಿತ ನೌಕರರಿಗೆ ಮಾರಕವಾಗಿರುವ 2014ರ ಕಾಯ್ದಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಹಿಂದೆ ಇದ್ದಂತೆ ಹಳೆಯ ನಿಶ್ಚಿತ ಪಿಂಚಣಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ನೌಕರರಿಗೆ ಇರುವಂತೆ ಅನುದಾನಿತ ನೌಕರರಿಗೂ ಜ್ಯೋತಿ/ಆರೋಗ್ಯ ಸಂಜೀವಿನಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗಳನ್ನು ಸಮಾವೇಶದಲ್ಲಿ ಆಗ್ರಹಿಸಲಾಗುವುದು.
ಆದ್ದರಿಂದ ಜಿಲ್ಲೆಯ ಎಲ್ಲಾ ಅನುದಾನಿತ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪ್ರತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.