ಬೆಂಗಳೂರು : ಮೆಟ್ರೋದರ ಏರಿಕೆ ಬಗ್ಗೆ ಕೇಂದ್ರ ದತ್ತ ಬೊಟ್ಟು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ದಾಖಲೆ ಸಮೇತ ಟಾಂಗ್ ಕೊಟ್ಟಿದ್ದು, ಮೆಟ್ರೋ ದರ ಏರಿಕೆಯಿಂದ ಜನರಿಗೆ ತೊಂದರೆಯಾಗಿದೆ.
ಅಲ್ಲದೆ ದರ ಹೆಚ್ಚಿಸುವುದು ರಾಜ್ಯ ಸರ್ಕಾರವಲ್ಲ, ಬದಲಾಗಿ ಕೇಂದ್ರ ಸರ್ಕಾರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಿದ ದರ ನಿಗದಿ ಕಮಿಟಿ ಎಂದು ಮುಖ್ಯಮಂತ್ರಿಗಳು ಟ್ವೀಟ್ (ಎಕ್ಸ್) ಮಾಡುವ ಮೂಲಕ ಕೇಂದ್ರದತ್ತ ಬೊಟ್ಟು ಮಾಡಿದ್ದರು.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು, ಶುಲ್ಕ ನಿಗದಿ ಸಮಿತಿಯು ಶಾಸನಬದ್ಧವಾಗಿರಬಹುದು. ಆದರೆ ಆ ಸಮಿತಿಗೆ ಶಿಫಾರಸು ಮಾಡುವುದು, ದರ ಭರಿಸುವ ಸಾಮರ್ಥ್ಯ, ಕೆಲವು ಆರ್ಥಿಕ ದೃಷ್ಟಿಕೋನಗಳು ರಾಜ್ಯ ಸರ್ಕಾರದಿಂದಲೇ ಶಿಫಾರಸು ಆಗಿರುತ್ತವೆ. ಯಾವುದೇ ಸುಳ್ಳುಗಳು ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದಿಂದ ಸಲ್ಲಿಕೆ ಆದ ಪತ್ರವನ್ನು ಪೋಸ್ಟ್ ಮಾಡಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳೇ ನಿಮ್ಮ ನೆಪಗಳನ್ನು ಕೇಳಿ ಸಾರ್ವಜನಿಕರು ಬೇಸತ್ತಿದ್ದಾರೆ. ನೀವು ಇದನ್ನು ಔಪಚಾರಿಕವಾಗಿ ತೆಗೆದುಕೊಳ್ಳಲು ಕಾಯುತ್ತಿದ್ದಾಗ, ಬೆಂಗಳೂರಿಗರು ಸುಮಾರು ಒಂದು ವರ್ಷದಿಂದ ತೀವ್ರ ದರ ಏರಿಕೆ ಬಿಸಿ ಅನುಭವಿಸುತ್ತಲೇ ಇದ್ದಾರೆ.
ಈ ವಿಷಯದ ಬಗ್ಗೆ ನಿಮ್ಮ ಗಮನ ಸೆಳೆಯಲು ನಾವು ಒಂದು ವರ್ಷ ನಿರಂತರ ಪ್ರಯತ್ನ ಮಾಡಿದ್ದೇನೆ. ನಿರಂತರವಾಗಿ ಸಾರ್ವಜನಿಕ ವಿರೋಧದ ಬಳಿಕ ನೀವು ಅಂತಿಮವಾಗಿ ಎಚ್ಚರಗೊಂಡಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಸ್ವಂತ ನಗರಾಭಿವೃದ್ಧಿ ಮತ್ತು ಹಣಕಾಸು ಇಲಾಖೆಗಳು ಬಿಎಂಆರ್ಸಿಎಲ್ಗೆ ಪತ್ರಗಳನ್ನು ಬರೆದಿವೆ. ಅದರಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ದರ ಪರಿಷ್ಕರಣೆಯನ್ನು ಕಡ್ಡಾಯ ಎಂದು ತಿಳಿಸಲಾಗಿದೆ.
ಸರ್ಕಾರದ ಮೇಲಿನ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ಮೆಟ್ರೋದರ ಏರಿಕೆ ಮಾಡುವ ಒತ್ತಾಯ ನಿಮ್ಮ ಸರ್ಕಾರದಿಂದ ಆರಂಭವಾಯಿತು. ಈ ಮೆಟ್ರೋ ಪ್ರಯಾಣ ದುಬಾರಿ ವಿಚಾರದಲ್ಲಿ ದಯವಿಟ್ಟು ರಾಜ್ಯವು ಅಸಹಾಯಕ ಪ್ರೇಕ್ಷಕ ಎಂಬಂತೆ ನಟಿಸುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಕನಿಷ್ಠ ಪಕ್ಷ ಈಗಲಾದರೂ ಕಾಯ್ದೆಯ ಹಿಂದೆ ಅಡಗಿಕೊಳ್ಳುವುದನ್ನು ನಿಲ್ಲಿಸಿ. ಫೆಬ್ರವರಿ 09ರಿಂದ ಜಾರಿಗೆ ಬರಲಿರುವ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಹೊಸ ಎಫ್ಎಫ್ಸಿಯನ್ನು ಪ್ರಾರಂಭಿಸಿ ಮತ್ತು ಸಮಯಕ್ಕೆ ಅನುಗುಣವಾಗಿ ದರ ತರ್ಕಬದ್ಧಗೊಳಿಬೇಕು. ಬೆಂಗಳೂರಿಗೆ ಹೊಣೆಗಾರಿಕೆ ಮತ್ತು ಕ್ರಮದ ಅಗತ್ಯವಿದೆ, ನಕಲಿ ಆಕ್ರೋಶವಲ್ಲ ಎಂದು ಅವರು ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.



