ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ವ್ಯವಸ್ಥಿತವಾಗಿದೆ. ಯಾವುದೇ ಸಂದರ್ಭದಲ್ಲೂ ಹತೋಟಿ ಮೀರಿ ಹೋಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪದಲ್ಲಿ ಹುರುಳಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿರುಗೇಟು ನೀಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕೈಗಾರಿಕೋದ್ಯಮಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಬೇರೆ ರಾಜ್ಯಕ್ಕಿಂತ ಸ್ಥಳಾಂತರ ಮಾಡುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರ. ಸ್ವಾಭಾವಿಕವಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಯಾವ ಕೈಗಾರಿಕೆಗಳು ರಾಜ್ಯ ಬಿಟ್ಟು ಹೊರ ಹೋಗುವ ಉದಹಾರಣೆ ಇಲ್ಲ ಎಂದರು.
ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ, ಡ್ರಗ್ಸ್ ದಂಧೆ ಇರುವುದು ನಿಜ. ಆದರೆ ಯಾವಾಗಿನಿಂದ ಇಂತಹ ಚಟುವಟಿಕೆಗಳಾಗಿವೆ ಅನ್ನುವುದನ್ನು ಅವಲೋಕನ ಮಾಡುವ ಅಗತ್ಯವಿದೆ. ಬಿಜೆಪಿ ಸರ್ಕಾರದ ಅವಧಿಗಿಂತಲೂ ಕಡಿಮೆ ಚಟುವಟಿಕೆಗಳಿವೆ. ರಾಜ್ಯದಲ್ಲಿ ಡ್ರಗ್ಸ್ ಮುಕ್ತವನ್ನಾಗಿಸುವ ಗುರಿ ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಆಂದೋಲನ ಸಹ ಕೈಗೊಳ್ಳಲಾಗಿದೆ ಎಂದರು.
ಈ ಭಾಗದಲ್ಲೂ ಸಹ ಡ್ರಗ್ಸ್ ದಂಧೆ ಕಡಿವಾಣಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮಾದಕ ವ್ಯಸನಿಗಳನ್ನು ಹಿಡಿದು ತಂದು ಅವರನ್ನು ಪರೀಕ್ಷೆಗೊಳಪಡಿಸಲಾಗಿದೆ. ಅವರ ಮೂಲಕ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ. ಆ ಮೂಲಕ ನಾವು ಇಡೀ ರಾಜ್ಯದಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಪ್ರತಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿನ್ನೆಯಷ್ಟೇ ಒಬ್ಬ ಡ್ರಗ್ ಪೆಡ್ಲರ್ನನ್ನು ಬಂಧನ ಮಾಡಲಾಗಿದೆ. ಇದಲ್ಲದೇ ಸೈಬರ್ ಕ್ರೈಂಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟಯವ ಪ್ರಯತ್ನಗಳು ಕೂಡ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹತೋಟಿಗೆ ತಂದಿದ್ದೇವೆ ಎಂದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಎಸ್ಸಿ, ಎಸ್ಟಿ ಹಣ ವರ್ಗಾವಣೆ ಮಾಡಿದ್ದಾರೆ ಅನ್ನುವುದು ದೊಡ್ಡ ಆರೋಪ ಮಾಡಿದ್ದಾರೆ. ಅವರಿಗೆ ಯಾರು ಈ ಅಂಕಿ ಸಂಖ್ಯೆ ಕೊಟ್ಟಿದ್ದು..?. ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಬೇಕು. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳುವುದಲ್ಲ. ನಾವು ಹಣ ವರ್ಗಾವಣೆ ಮಾಡಿಲ್ಲ. ಕಾರ್ಯಕ್ರಮಕ್ಕೆ ಅದನ್ನು ಉಪಯೋಗ ಮಾಡಿದ್ದೇವೆ ಎಂದರು.
ಬಿಜೆಪಿಯವರು ಕೇವಲ ಪ್ರಚಾರಕ್ಕೆ ಮಾತನಾಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಸಂಸತ್ತಲ್ಲಿ ರಾಹುಲ್ ಗಾಂಧಿಯ ಜಾತಿ ಬಗ್ಗೆ ಮಾತನಾಡಿದ್ದಾರೆ. ಸಚಿವ ಅನುರಾಗ್ ಠಾಕೂರ ಹೇಳಿಕೆ ಏನನ್ನು ತೋರಿಸುತ್ತದೆ. ಅದಕ್ಕಾಗಿ ಈ ರೀತಿಯ ಕೀಳುಮಟ್ಟದ ಭಾಷೆ ಬಳಸುತ್ತಾರೆ ಎಂದರು.
ಬೆಂಗಳೂರಿನಲ್ಲಿ ದೊರೆತ ಮಾಂಸ ನಾಯಿಯದ್ದು ಅಲ್ಲ. ಆದರೆ ಅಲ್ಲಿಗೆ ಕೆಲವರು ಹೋಗಿ ಗಲಾಟೆ ಮಾಡಿದ್ದಾರೆ. ಪುನೀತ್ ಕೆರಹಳ್ಳಿ ಶಾಂತಿ ಭಂಗ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಿದೆ. ಹಿಂದೆ ಕೂಡ ಅವರ ಮೇಲೆ ಕೆಲ ಕೇಸ್ಗಳಿವೆ. ಅಲ್ಲಿ ಕಳಪೆ ಮಾಂಸ ಮಾರಾಟ ವಿಚಾರ ಇಲ್ಲ ಎಂದರು.
ರಾಜಕೀಯಕ್ಕೆ ನಾನು ಸನ್ಯಾಸಿ ಆಗಿ ಬಂದಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅಂತಹ ಸಂದರ್ಭವೂ ಇಲ್ಲ. ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದರು.