ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಗೌರಿ ಹಬ್ಬ ದಿನವಾದ ಮಂಗಳವಾರ ಬಾಗಿನ ಅರ್ಪಿಸಿದರು.
ಶ್ರೀ ಸಿದ್ದೇಶ್ವರ, ಬಸವೇಶ್ವರ ಹಾಗೂ ತಾಯಿ ಹೊನ್ನಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾಸಕರಾದ ಡಾ.ಮಂತರ್ ಗೌಡ ಅವರು ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಶಾಸಕರು ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹಾಗೂ ತಾಯಿ ಹೊನ್ನಮ್ಮ ಕೆರೆಗೆ ಬಾಗಿನ ಸಮರ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ವರ್ಷ ಭಕ್ತಾಧಿಗಳು ಆಗಮಿಸುವುದು ವಿಶೇಷ ಎಂದರು.
ತಾಯಿ ಹೊನ್ನಮ್ಮನ ಕೆರೆಗೆ ನವ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ. ಗೌರಿ ಹಬ್ಬ ಆಚರಣೆಯಿಂದ ಕುಟುಂಬದವರೆಲ್ಲರೂ ಒಂದೆಡೆ ಸೇರುವುದು ವಿಶೇಷವಾಗಿದೆ ಎಂದರು.
ಈ ಬಾರಿ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆಯಾಗಲಿದೆ. ಹೆಚ್ಚಿನ ಮಳೆಯಿಂದಾಗಿ ಕೆಲವು ಕಡೆ ತೊಂದರೆಯೂ ಸಹ ಆಗಿದೆ ಎಂದು ಶಾಸಕರು ನುಡಿದರು. ಪ್ರಮುಖರಾದ ಕೆ.ಪಿ.ಚಂದ್ರಕಲಾ, ಲೋಕೇಶ್, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ.ಬಿ.ಚಂದ್ರಶೇಖರ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಸದಸ್ಯರು ಇತರರು ಇದ್ದರು.
ಮತ್ತಷ್ಟು ಮಾಹಿತಿ; ಸೋಮವಾರಪೇಟೆ ತಾಲ್ಲೂಕು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮ್ಮನ ದೇವಸ್ಥಾನದಲ್ಲಿ ಹಲವು ಶತಮಾನಗಳಿಂದ ಗೌರಿ ಹಬ್ಬದಂದು ಜಿಲ್ಲೆಯ ಹಾಗೂ ಅಕ್ಕಪಕ್ಕದ ಜಿಲ್ಲೆಯವರು ಸಹ ಹೊನ್ನಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಗೌರಿ ಹಬ್ಬದ ಪ್ರಯುಕ್ತ ಸಡಗರ ಸಂಭ್ರಮದಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಹೆಣ್ಣು ಮಕ್ಕಳು ಹೊನ್ನಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ಪವಿತ್ರ ಪುಣ್ಯಕ್ಷೇತ್ರವಾದ ಹೊನ್ನಮ್ಮನ ಕೆರೆಯಲ್ಲಿ ತೀರ್ಥ ಪ್ರಸಾದ ತೆಗೆದುಕೊಂಡು ಭಕ್ತಿಯನ್ನು ಸಾರುತ್ತಾರೆ. ಹೊನ್ನಮ್ಮನ ಕೆರೆಯು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ತಾಯಿ ಹೊನ್ನಮ್ಮ ಕೆರೆಗೆ ಹಾರವಾದ ಘಟನೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ. ಪ್ರತೀ ವರ್ಷ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ವಿಶೇಷ ಗೌರಿ ಹಬ್ಬದಂದು ಬಾಗಿನ ಅರ್ಪಿಸಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸುವ ಸಂಪ್ರದಾಯವು ವೈಶಿಷ್ಟವಾಗಿದೆ.