ಪುತ್ತೂರು : ಮಾಜಿ ಶಾಸಕರ ಊರಾಗಿರುವ ಹಿರೆಬಂಡಾಡಿ ಗ್ರಾಮ ಅಭಿವೃದ್ಧಿಯಲ್ಲಿ ಬಹುತೇಕ ಹಿಂದೆ ಬಿದ್ದಿದೆ. ಇಲ್ಲಿನ ಗ್ರಾಮೀಣ ರಸ್ತೆಗಳು ಕಾಂಕ್ರೀಟ್ ಕರಣವಾಗದೆ ಜನರಿಗೆ ಸಮಸ್ಯೆಯಾಗಿದೆ. ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಸರಿಯಾಗಿಲ್ಲ. ದಾರಿದೀಪ ಕೂಡಾ ಇಲ್ಲ. ಇಂತಹ ಸ್ಥಿತಿ ಖೇದಕರವಾದ ವಿಚಾರವಾಗಿದ್ದು, ಈಗಾಗಲೇ ಇಲ್ಲಿನ ಕೆಲ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಈ ಗ್ರಾಮಕ್ಕೂ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಹಿರೆಬಂಡಾಡಿ ಗ್ರಾಮದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ನಡೆಸಿ ಮಾತನಾಡಿದ ಅವರು,
ಇಲ್ಲಿನ ಷಣ್ಮುಖ ದೇವಳದ ಕಾಮಗಾರಿ ಪೂರ್ಣಗೊಳಿಸಲು ಮಾಜಿ ಶಾಸಕರಿಂದ ಆಗಿಲ್ಲ ಎಂದು ದೇವಳದ ಪ್ರಮುಖರು ತಿಳಿಸಿದ್ದಾರೆ. ಅದಕ್ಕೂ ಅನುದಾನ ನೀಡುತ್ತೇನೆ. ಕೆಮ್ಮಾರ ಮಸೀದಿ ರಸ್ತೆ ಪಕ್ಕ ತಡೆಗೋಡೆ ನಿರ್ಮಾಣಕ್ಕೆ ರೂ.೯೦ಲಕ್ಷ ಅನುದಾನ ಒದಗಿಸಿದ್ದೇನೆ. ಇಲ್ಲಿನ ಭಜನಾ ಮಂದಿರಕ್ಕೂ ಅನುದಾನ ನೀಡುವುದಾಗಿ ತಿಳಿಸಿದರು.
ಮುಂದುವರೆದು ಹಿರೆಬಂಡಾಡಿ ಗ್ರಾಪಂನಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಅನುದಾನ ಇಡುವಲ್ಲಿ ರಾಜಕೀಯ ನಡೆಸಲಾಗುತ್ತಿದೆ. ಹರಿನಗರ ಕಾಲೊನಿಯ ನಳ್ಳಿಯಲ್ಲಿ ಮಣ್ಣು ಬರುತ್ತಿದೆ. ಇಷ್ಟು ವರ್ಷವಾದರೂ ನಮ್ಮ ಈ ಪ್ರದೇಶಕ್ಕೆ ಯಾವ ಶಾಸಕರೂ ಸಮಸ್ಯೆ ಆಲಿಸಲು ಬಂದಿಲ್ಲ. ಈಗ ನೀವು ಬಂದಿದ್ದೀರಿ. ಇಲ್ಲಿನ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಇಲ್ಲಿನ ಗ್ರಾಪಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹರಿನಗರ ಗ್ರಾಮಸ್ಥರು ದೂರು ನೀಡಿದರು.
ಮಾಜಿ ಅಧ್ಯಕ್ಷರ ಕಾರುಬಾರು : ಹಿರೆಬಂಡಾಡಿ ಗ್ರಾ.ಪಂ. ಕಚೇರಿಗೆ ಹೋಗುವ ಹಾಗಿಲ್ಲ. ಅಲ್ಲಿ ಮಾಜಿ ಅಧ್ಯಕ್ಷರದ್ದೇ ಕಾರುಬಾರು. ಪಿಡಿಒ ಅವರು ಹೇಳಿದಂತೆ ಕುಣಿಯುತ್ತಿದ್ದಾರೆ. ಮಾಜಿ ಅಧ್ಯಕ್ಷರು ಹೇಳಿದರೆ ಮಾತ್ರ ಇಲ್ಲಿ ಕೆಲಸ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಹರಿನಗರ ಕಾಲೊನಿ ನಿವಾಸಿಗಳು ಪಿಡಿಒ ರಾಜಕೀಯ ಬಿಟ್ಟು ಕೆಲಸ ಮಾಡುವಂತೆ ಸೂಚಿಸಿ. ಮಾಜಿ ಅಧ್ಯಕ್ಷನನ್ನು ಗ್ರಾಪಂನಿಂದ ಹೊರಹಾಕಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ, ಅಲ್ಪಸಂಖ್ಯಾತ ಘಟಕ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಬಾಬು ಅಗರಿ, ಉಳತ್ತೋಡಿ ಷಣ್ಮುಖ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಡಿತ್ತಾಯ, ದೇವಪ್ಪ ಪಡ್ಪು, ಗಂಗಾಧರ ಎಲಿಯ, ಸದಾಶಿವ ಬಂಗೇರ, ವಿದ್ಯಾ ನಿಡ್ಯಂಕಿ, ಶಿವಚಂದ್ರ ನಿಡ್ಯಂಕಿ, ಗ್ರಾಪಂ ಸದಸ್ಯೆ ಗೀತಾದಾಸರ ಮೂಲೆ, ಭವಾನಿ ಮುರದ ಮೇಲು, ಸವಿತಾ ಹರೀಶ್, ಸತೀಶ್ ಶೆಟ್ಟಿ ಹೆನ್ನಾಳ ಮತ್ತಿತರರು ಇದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ರವಿ ಪಟ್ಟಾರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



