ಮೈಸೂರು: ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಬೀರಿಹುಂಡಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತ ಯಾಚಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಹಲವಾರು ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುತ್ತಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷ ೨೦ಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿದಿರುವುದರಿಂದ ಬಿಜೆಪಿ ಪಕ್ಷಕ್ಕೆ ಈ ಚುನಾವಣೆ ನುಂಗಲಾರದ ತುತ್ತಾಗಿದೆ. ನುಡಿದಂತೆ ನಡೆದು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಕೊಟ್ಟ ಭರವಸೆಯನ್ನು ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂ, ರೈತರ ಸಾಲ ಮನ್ನಾ, ಕೃಷಿ ಮೇಲಿನ ಜಿಎಸ್ಟಿ ರದ್ದು, ಯುವಕರಿಗೆ ಉದ್ಯೋಗದ ಜೊತೆಗೆ ಭತ್ಯೆಯನ್ನು ನೀಡಲಾಗುವುದು. ಆದ್ದರಿಂದ ಸುಳ್ಳಿನ ಪಕ್ಷ, ಭ್ರಷ್ಟಾಚಾರದಿಂದ ಕೂಡಿರುವ ಪಕ್ಷ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ. ಲಕ್ಷ್ಮಣ್ರವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮುಡಾ ಅಧ್ಯಕ್ಷ ಕೆ. ಮರೀಗೌಡ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಮುಂಡೇಶ್ವರಿ ಕ್ಷೇತ್ರವನ್ನು ೧೯೮೩ರಿಂದಲೂ ಅಭಿವೃದ್ಧಿ ಪಡಿಸಿಕೊಂಡು ಬಂದಿದ್ದಾರೆ. ಕಾವೇರಿಯಿಂದ ೨೬ ಹಳ್ಳಿಗಳಿಗೆ ಕುಡಿಯುವ ನೀರನ್ನು ನೀಡಿದ್ದಾರೆ. ಕಬಿನಿಯಿಂದ ಕುಡಿಯುವ ನೀರು, ರಸ್ತೆಗಳು, ಶಾಲೆಗಳು, ಬೀರಿಹುಂಡಿ ಗ್ರಾಮಕ್ಕೆ ೮ ಕೋಟಿ ವೆಚ್ಚದ ಐಟಿಐ ಕಾಲೇಜು, ಹೈಸ್ಕೂಲು, ಆಸ್ಪತ್ರೆ, ಹಾಸ್ಟೆಲ್, ಚರಂಡಿ, ರಸ್ತೆ ಅಭಿವೃದ್ಧಿ ಎಲ್ಲವನ್ನು ಮಾಡಿದ್ದಾರೆ. ಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದ್ದು ಇಲ್ಲಿ ಸಿದ್ದರಾಮಯ್ಯರವರೇ ಅಭ್ಯರ್ಥಿಯಾಗಿದ್ದಾರೆಂದು ತಿಳಿದುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಡಾ. ಯತೀಂದ್ರ ಸಿದ್ದರಾಮಯ್ಯರವರ ನಾಯಕತ್ವದಲ್ಲಿ ಎಂ. ಲಕ್ಷ್ಮಣ್ರವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯರವರ ಕೈಬಲಪಡಿಸಬೇಕು ಎಂದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಜವರಪ್ಪ, ಕೂರ್ಗಳ್ಳಿ ಮಹದೇವ್, ಮಾದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ನಾಗವಾಲ ನರೇಂದ್ರ, ತಾ.ಪಂ. ಮಾಜಿ ಸದಸ್ಯರಾದ ಕೆಂಚಪ್ಪ, ಜಿ.ಕೆ. ಬಸವಣ್ಣ, ಎಂ.ಟಿ. ರವಿಕುಮಾರ್, ಮಾರ್ಬಳ್ಳಿ ಕುಮಾರ್, ಡಾ. ಪ್ರಕಾಶ್, ಬಸವೇಗೌಡ, ಗುಡ್ಡಪ್ಪ ಮಲ್ಲೇಶ್, ಬಿ. ರವಿ, ನಾಗಣ್ಣ, ಸ್ವಾಮಿಗೌಡ, ಸಿದ್ದರಾಜು, ಮಹದೇವ್, ಚಂದ್ರು, ಧನಗಳ್ಳಿ ಬಸವರಾಜು, ಅಕ್ಕಿಶಿವಣ್ಣ ಹಾಜರಿದ್ದರು.