ಪಾಂಡವಪುರ : ತಾಯಿ ಹಾಗೂ ಮಕ್ಕಳಿಬ್ಬರು ಆಕಸ್ಮಿಕವಾಗಿ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು, ತಾಯಿ ಪಾರಾಗಿ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ತಾಲೂಕಿನ ಬನಘಟ್ಟದ ಬಳಿ ನಡೆದಿದೆ.
ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಗುಯ್ಯಪ್ಪರ ಲಕ್ಷ್ಮಣ ಅವರ ಮೊಮ್ಮಕಳಾದ ಲಿತೀಶಾ (೮) ಹಾಗೂ ಕಿಸಾನ್ (೨) ಎಂಬುವವರು ನೀರು ಪಾಲಾಗಿರುವ ಮಕ್ಕಳು.
ಘಟನೆ ವಿವರ : ಗುಯ್ಯಪ್ಪರ ಲಕ್ಷ್ಮಣ ಅವರ ಸೊಸೆ ವಿದ್ಯಾ ಕೋಂ ದಯಾನಂದ ಅವರು ಬನಘಟ್ಟ ತಿರುವಿನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದು ಅದರ ಹಿಂಭಾಗವಿರುವ ವಿಸಿ ನಾಲೆ ಬಳಿ ತೆರಳಿ ಆಕಸ್ಮಿಕವಾಗಿ ವಿದ್ಯಾ ಹಾಗೂ ಅವರ ಎರಡು ಮಕ್ಕಳು ವಿಸಿ ನಾಲಿಗೆ ಬಿದ್ದಿದ್ದಾರೆ. ತಕ್ಷಣವೇ ರಸ್ತೆ ಪಕ್ಕದಲ್ಲಿ ಎಳನೀರು ಮಾಡುತ್ತಿದ್ದ ಸ್ಥಳೀಯರು ವಿದ್ಯಾ ಅವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಎರಡು ಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಾಂಡವಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಮಕ್ಕಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ವಿಶ್ವೇಶ್ವರಯ್ಯ ನಾಲೆ ಬಳಿ ತಾಯಿ ಹಾಗೂ ಇಬ್ಬರು ಮಕ್ಕಳು ಯಾವ ಉದ್ದೇಶಕ್ಕಾಗಿ ಬಂದು ನೀರಿನಲ್ಲಿ ಬಿದ್ದಿರುತ್ತಾರೆ ಎಂಬುದರ ಬಗ್ಗೆ ರಕ್ಷಣೆಯಾಗಿರುವ ತಾಯಿ ವಿದ್ಯಾರವರನ್ನು ಪೊಲೀಸರು ವಿಚಾರಿಸಲಾಗಿ ದೇವಸ್ಥಾನ ಹಿಂಬಾಗದ ನಾಲೆಯ ಬಳಿ ಫೋಟೋ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಗಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಅವಳನ್ನು ರಕ್ಷಣೆ ಮಾಡಲು ಹೋಗಿ ತನ್ನ ಗಂಡು ಮಗುವಿನೊಂದಿಗೆ ತಾನು ಸಹ ನೀರಿಗೆ ಬಿದ್ದ ಬಗ್ಗೆ ತಿಳಿಸಿದ್ದು ಆದರೆ ಅವರು ಹೋಗಿರುವ ಕಾಲುವೆಯ ಸ್ಥಳವು ಹೆಚ್ಚಾಗಿ ಸಾರ್ವಜನಿಕರು ಹೋಗದೆ ಇರುವ ಪ್ರದೇಶವಾಗಿದ್ದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಬದುಕಿರುವ ವಿದ್ಯಾರವರೇ ಸತ್ಯಾಂಶ ತಿಳಿಸಬೇಕಾಗಿದೆ.