ತುಮಕೂರು : 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ತಾಯಿ ಹಂಸಲೇಖ(36) ಮತ್ತು ಪುತ್ರ ಗುರುಪ್ರಸಾದ್(8) ಮೃತರು. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೆರೆಯಿಂದ ತಾಯಿ, ಮಗನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವಗಳು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಭೂಪಸಂದ್ರ ಗ್ರಾಮದ ನಾಗೇಶ್ ಜೊತೆಗೆ ಹಂಸಲೇಖರ ಮದುವೆಯಾಗಿತ್ತು. ಅನಾರೋಗ್ಯದಿಂದ ಹಂಸಲೇಖ ಪತಿ ನಾಗೇಶ್ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. 3 ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್ ಜತೆ ಹಂಸಲೇಖಳಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಏಕಾಏಕಿ ಇಂದು ಬೆಳಗ್ಗೆ ಕೆರೆಯಲ್ಲಿ ಮಗನ ಜೊತೆಗೆ ತಾಯಿಯ ಶವ ಪತ್ತೆ ಆಗಿದೆ.



