ರಾಯಚೂರು: ಮುಡಾ ಪ್ರಕರಣ ನಾವು ತಿಳಿದುಕೊಂಡ ಮಟ್ಟದಲ್ಲಿಲ್ಲ. ಬಹಳ ಆಳವಾಗಿದೆ. ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು, ಈಗ ಚರ್ಚೆ ಮಾಡುವುದು ಅನಾವಶ್ಯಕ. ಆದರೆ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಯಾರೇ ಆಗಲಿ ತುಂಬಾ ದಿನ ಎಲ್ಲರಿಗೂ ಮೋಸ ಮಾಡಲು ಆಗುವುದಿಲ್ಲ. ನಾನು ಮೈಸೂರು ಉಸ್ತುವಾರಿ ಮಂತ್ರಿಯಾಗಿದ್ದಾಗ 7,900 ಸೈಟ್ ಗಳನ್ನು ಎರಡೂವರೆ ವರ್ಷದಲ್ಲಿ ಸಿದ್ಧ ಮಾಡಿಸಿದ್ದೆ. ಕೋವಿಡ್ ಮುಗಿದ ಮೇಲೆ ಹರಾಜು ಹಾಕಿಸುವ ಉದ್ದೇಶವಿತ್ತು. ಇದರಿಂದ 15 ಸಾವಿರ ಕೋಟಿ ರೂ. ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ರಾತ್ರಿ ಒಂದು ಗಂಟೆಗೆ ನನಗೆ ಮೈಸೂರಿನಿಂದಲೇ ನನ್ನನ್ನು ಎತ್ತಂಗಡಿ ಮಾಡಲಾಯಿತು ಎಂದು ವಿವರಿಸಿದರು.
ನನ್ನ 45 ವರ್ಷದ ರಾಜಕಾರಣದಲ್ಲಿ ಕಂಡಂತೆ ಸಿಎಂ ಸಿದ್ದರಾಮಯ್ಯ ಒಬ್ಬ ಮುತ್ಸದ್ದಿ. ಅಂಥವರ ಮೇಲೆ ಆರೋಪ ಬಂದಿದೆ. ಅವರು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ನಮಗೆ. ಆದರೆ ಆರೋಪದ ಬಗ್ಗೆ ಕೂಗು ಬಂದಿದೆ. ತನಿಖೆಗೆ ಗವರ್ನರ್ ಆದೇಶ ಮಾಡಿದ್ದಾರೆ. ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಆದೇಶ ಏನು ಬರುತ್ತದೆಯೋ ಕಾದು ನೋಡಬೇಕಿದೆ. ಆಮೇಲೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದರು.
ರಾಜ್ಯದಲ್ಲಿ ಸದ್ಯ ಪರಸ್ಥಿತಿ ಕುದಿತಾ ಇದೆ. ಇಂಥ ವೇಳೆ ಕಾಂಗ್ರೆಸ್ ವರು ಇನ್ನೊಂದು ಮತ್ತೊಂದು ಹೇಳುವುದು ಸಮಂಜಸ ಅಲ್ಲ. ನಾವು ಎಷ್ಟೇ ದೊಡ್ಡವರಾದರೂ ಕಾನೂನಿನ ಎದುರು ಎಲ್ಲರೂ ಸಮಾನರು. ಡಾ.ಅಂಬೇಡ್ಕರ್ ಎಲ್ಲರಿಗೂ ಸಮಾನ ಕಾನೂನು ಮಾಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಚಿಂತಕರಲ್ಲಿ ಒಬ್ಬರು. ಯಾರು ಯೂಟರ್ನ್ ಹೊಡೆದಿಲ್ಲ. ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಹೊರಗೆ ಬರುತ್ತದೆ. ರಾಜ್ಯಪಾಲರ ಹುದ್ದೆ ಆಯಾ ರಾಜ್ಯಗಳಿಗೆ ಗೌರವಿಸುವ ಹುದ್ದೆ. ಕಾನೂನು ಸಂರಕ್ಷಣೆ ಮಾಡುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರ ತೀರ್ಮಾನ ಸರಿಯಾಗಿದೆ. ಕಾಂಗ್ರೆಸ್ ನವರು ಬರೀ ಹುಲಿ ಬಂತು ಹುಲಿ ಎನ್ನುವ ಜಾಯಮಾನದವರು. ಎಷ್ಟು ಜನರಿಗೆ ಕಿವಿಯಲ್ಲಿ ಹೂ ಇಡುತ್ತಾರೆ. ಕೋವಿಡ್ ತನಿಖೆ ಅಗತ್ಯ ಇದೆಯಾ? ಎಂದು ಪ್ರಶ್ನಿಸಿದರು.