ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸೂಕ್ತ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಅಭಿಪ್ರಾಯಪಟ್ಟರು.
ಇಂದು ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ರಾಜ್ಯಪಾಲರು ಕಾನೂನಾತ್ಮಕವಾಗಿ ಏನು ಮಾಡಬೇಕು, ಏನು ಇಂತಹ ವಿಚಾರದಲ್ಲಿ ಏನು ಕ್ರಮವಹಿಸಬೇಕು ಅದನ್ನ ಮಾಡುತ್ತಾರೆ. ರಾಜ್ಯಪಾಲರ ನಿರ್ಧಾರದಲ್ಲಿ ಏನೂ ತಪ್ಪಿಲ್ಲ. ಹಗರಣ ನಡೆದಿಲ್ಲ ಎಂದಾದರೆ, ಸಿದ್ದರಾಮಯ್ಯ ಅವರದು ಏನೂ ತಪ್ಪಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಲಿ, ತಪ್ಪಿಲ್ಲ ಎಂದು ವರದಿ ಬಂದಲ್ಲಿ ಮತ್ತೆ ತಮ್ಮ ಪದವಿಯಲ್ಲಿ ಮುಂದುವರಿಯಲಿ ಎಂದರು.
ಇದೇನು ನಮಗೆ ಸಂತೋಷದ ವಿಚಾರವಲ್ಲ. ಜನರು ೧೩೬ ಸೀಟು ಕೊಟ್ಟು ಅವರದಿ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ನಾವೂ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಮ್ಮ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಇಳಿಸೋದು, ಬಿಳಿಸೋದು ನಮಗೆ ಸಂತೋಷದ ವಿಚಾರ ಅಲ್ಲ. ಉತ್ತಮ ಆಡಳಿತಕ್ಕಾಗಿ ಜವಾಬ್ದಾರಿಯುತವಾಗಿ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತಿದ್ದೇವೆ. ಇಂತಹ ಸಂದರ್ಭಗಳು ಹಿಂದೆಯೂ ಸಾಕಷ್ಟು ಆಗಿದೆ. ಆಗೆಲ್ಲ ರಾಜ್ಯಪಾಲರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ತಮಗೆ ವಿಶ್ವಾಸ ಇದ್ರೆ ರಾಜೀನಾಮೆ ನೀಡಲಿ ಎಂದು ಹೇಳಿದರು.