Friday, April 11, 2025
Google search engine

Homeರಾಜ್ಯಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ: ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಕೆ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ: ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಕೆ

ಲೋಕಾಯುಕ್ತಕ್ಕೆ ಮೂಡಾ ಹಗರಣದ ಮತ್ತಷ್ಟು ದಾಖಲೆ ಒದಗಿಸಿದ ಎನ್‌.ಆರ್‌.ರಮೇಶ್‌

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಮತ್ತಷ್ಟು ಮಹತ್ವಪೂರ್ಣ ದಾಖಲೆ ಒದಗಿಸಿಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ರಮೇಶ್‌ ಅವರು ಈ ಹಿಂದೆ ಲೋಕಾಯುಕ್ತಕ್ಕೆ 400 ಪುಟಗಳ ದಾಖಲೆ ನೀಡಿ ಹಗರಣದ ತನಿಖೆ ನಡೆಸುವಂತೆ ದೂರು ನೀಡಿದ್ದರು.

ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ 25 ಪುಟಗಳ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿರುವುದಾಗಿ ಎನ್‌.ಆರ್‌.ರಮೇಶ್‌ ತಿಳಿಸಿದ್ದಾರೆ.

1997-98 ರ ಅವಧಿಯಲ್ಲಿ ಅಭಿವದ್ಧಿ ಪಡಿಸಿ – ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿ ದೀಪಗಳನ್ನು ಒಳಗೊಂಡ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು ಹಾಗೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸದರಿ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆ ಎತ್ತಿದ್ದವು.

ಆದರೆ, ಅದಾಗಲೇ ಅಭಿವದ್ಧಿಗೊಂಡಿದ್ದ ಸದರಿ ಬಡಾವಣೆಯಲ್ಲಿ 3.16 ಎಕರೆ ವಿಸ್ತೀರ್ಣದ ಪ್ರದೇಶವನ್ನು ಭೂ ಪರಿವರ್ತನೆ ಮಾಡಿ ಕೊಡುವಂತೆ 2004 ರಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಅಂದಿನ ಜಿಲ್ಲಾಧಿಕಾರಿಗಳು ತಾಲ್ಲೂಕು ತಹಶೀಲ್ದಾರರ ವರದಿಯನ್ನಾಧರಿಸಿ 2005 ರಂದು ಖುದ್ದು ಸ್ಥಳ ಪರಿಶೀಲನೆ ಮಾಡಿ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆ ಮಾಡಲು ಅನುಮತಿ ನೀಡಲಾಗಿದೆ ಎಂದು ಸ್ಥಳ ತನಿಖಾ ಟಿಪ್ಪಣಿಯಲ್ಲಿ ಬರೆಯಲಾಗಿದೆ.

2005 ಕ್ಕೂ ಏಳೆಂಟು ವರ್ಷಗಳ ಹಿಂದೆಯೇ ಸಂಪೂರ್ಣ ಅಭಿವದ್ಧಿ ಪಡಿಸಲಾಗಿದ್ದ ದೇವನೂರು 03ನೇ ಹಂತದ ಬಡಾವಣೆಯಲ್ಲಿ ವ್ಯವಸಾಯದ ಜಮೀನು ಇರಲು ಹೇಗೆ ಸಾಧ್ಯ. 2004-2006 ರ ಅವಧಿಯಲ್ಲಿ ಧರ್ಮಸಿಂಗ್‌ ಅವರ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಕ್ಕೆ ಮತ್ತು ಒತ್ತಡಗಳಿಗೆ ಒಳಗಾಗಿದ್ದ ಆಗಿನ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ ಗಳು ಈ ರೀತಿಯ ಹಾಸ್ಯಾಸ್ಪದ ಮತ್ತು ಕಾನೂನು ಬಾಹಿರವಾದ ಭೂ ಪರಿವರ್ತನೆ ಕಾರ್ಯಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಜಮೀನಿಗೆ ಸಂಬಂಧಿಸಿ ದಂತೆ, ದೇವನೂರು 03ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಭೂಸ್ವಾಧೀನಪಡಿಸಿಕೊಂಡಿದ್ದ ಅಷ್ಟೂ ಜಮೀನುಗಳ ಮಾಲೀಕರುಗಳಿಗೆ ಮೂಡಾದ ಆಯುಕ್ತರು, ಭೂಸ್ವಾಧೀನ ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಮೈಸೂರಿನ ಪ್ರಧಾನ ಸಿವಿಲ್‌ ನ್ಯಾಯಾಲಯ ದಲ್ಲಿ ಒಟ್ಟು . 1,50,59,642.70 ಗಳಷ್ಟು ಸಂಪೂರ್ಣ ಪರಿಹಾರ ಧನವನ್ನು ಠೇವಣಿ ಇಟ್ಟಿರುತ್ತಾರೆ.

ಪ್ರಸ್ತುತ ತನಿಖಾ ಹಂತದಲ್ಲಿರುವ ಮೂಡಾದ ಈ ಬದಲಿ ನಿವೇಶನಗಳ ಹಗರಣದ ತನಿಖೆಗೆ, ಈ ಪತ್ರದೊಂದಿಗೆ ಲಗತ್ತಿಸಿರುವ 25 ಪುಟಗಳ ಎರಡು ದಾಖಲೆಗಳು ಅತ್ಯಂತ ಪ್ರಮುಖ ದಾಖಲೆಗಳಾಗುತ್ತವೆ ಎಂಬುದನ್ನು ಮಾನ್ಯ ಲೋಕಾಯುಕ್ತರ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular