ತುಮಕೂರು: ನೂರಕ್ಕೆ 99 ರಷ್ಟು ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ ಆಗುವ ಲಕ್ಷಣ ಇದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎನ್ ರಾಜಣ್ಣ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದಿಂದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ.
ಮಾಜಿ ಸಂಸದ ಮುದ್ದಹನುಮೇಗೌಡರು ಪೆಬ್ರವರಿ 1ಅಥವಾ 2 ರಂದು ಪಕ್ಷ ಸೇರಬಹುದು ಎಂದರು.
ಶೆಟ್ಟರ್, ಸವದಿನೂ ಕಾಂಗ್ರೆಸ್ ಬಿಟ್ಟು ಹೋಗಲ್ಲ.ಅವರು ಆತ್ಮ ಗೌರಕ್ಕೆ ಕೆಲಸ ಮಾಡೋರು. ಅವರನ್ನು ಬಿಜೆಪಿಯವರು ಹೊರಗಡೆ ಹಾಕಿದ್ದಾರೆ. ಶೆಟ್ಟರ್ ಬೆಳಗಾವಿ ಅಥವಾ ಧಾರಾವಾಡ ಕ್ಷೇತ್ರದಿಂದ ನಿಲ್ಲಬಹುದು ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ನಂತರ ಬದಲಾವಣೆ ಆಗಬಹುದು ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ದಿನೇ ದಿನೇ ಬದಲಾವಣೆ ಆಗಬಹುದು ಅದನ್ನೇ ಹೇಳಿದ್ದೆ. ಆದರೆ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಆಗಲ್ಲ ಎಂದರು.
ನಿಗಮ ಮಂಡಳಿ ಅಯ್ಕೆ ವಿಚಾರದಲ್ಲಿ ರಾಜಣ್ಣ ಗರಂ ಆಗಿದ್ದು, ಹೈಕಮಾಂಡ್ ವಿರುದ್ಧ ಗುಡುಗಿದ್ದಾರೆ.
ನಮ್ಮನ್ನು ಕೇಳಿ ನಿಗಮ ಮಂಡಳಿಗೆ ಆಯ್ಕೆ ಮಾಡಬೇಕಾ…ಅಥವಾ ದೆಹಲಿಯಲ್ಲಿ ಕುಂತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದರೆ ಹೇಗೆ ? ನಮಗೊಂದು ಮಾತು ಕೇಳಬೇಕಲ್ಲ. ಸ್ಥಳೀಯವಾಗಿ ಯಾರ್ಯಾರು ಕೆಲಸ ಮಾಡಿದ್ದಾರೆ ಎಂದು ನಮಗೆ ಗೊತ್ತಲ್ಲ. ನಾವೇನು ಗುಲಾಮಾರಾ? ನಾವು ಅದನ್ನೆಲ್ಲಾ ಸಹಿಸೋದಿಲ್ಲ. ಯಾರ ಹೆಸರನ್ನು ಹೇಳಲು ಬಯಸೋದಿಲ್ಲ. ಎಂಎಲ್ ಎಗಳ ಪಟ್ಟಿ ಹೈಕಮಾಂಡ್ ಕಳಿಸೋದು ಸರಿ ತಪ್ಪಲ್ಲ. ಮೊದಲೆಲ್ಲ ಸಿಎಂಗೆ, ಅಧ್ಯಕ್ಷರಿಗೆ ಜವಾಬ್ದಾರಿ ಕೊಡುತಿದ್ದರು. ಈಗ್ಯಾಕೋ…ಸಲಹೆ ಕೊಡೋರು ಈಗ ಅವರೇ ಪಟ್ಟಿ ಮಾಡಿ ಕಳಿಸ್ತಾರೆ…ಅಂದರೆ ಈಗ ಹೊಸ ಹೈಕಮಾಂಡ್, ಈಗ, ನಮ್ಮ ಮೇಲೆ ಈ ರೀತಿಯ ಸವಾರಿ ಮಾಡೋದಕ್ಕೆ ನಾವು ಸಹಿಸೋದಿಲ್ಲ. ಇಡೀ ರಾಜ್ಯದಲ್ಲಿ ಅದೇ ಆಗಿದೆ ಎಂದು ಕಿಡಿಕಾರಿದರು.
ಜಿ.ಪರಮೇಶ್ವರ ಮಾತ್ರ ಅಲ್ಲ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಇದೇರೀತಿ ಮಾಡಿದರೆ ಅವರೇ ಬಂದು ಗೆಲ್ಲಿಸಬೇಕಾಗುತ್ತದೆ ಎಂದು ಹರಿಹಾಯ್ದರು.