ಬೆಂಗಳೂರು: ರಾಜ್ಯದಲ್ಲಿ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚಿತ್ರದುರ್ಗ ಮುರುಘರಾಜೇಂದ್ರ ಶರಣರಿಗೆ ಹೈಕೋರ್ಟ್ ನೀಡಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಪ್ರಕರಣ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಪುನಃ ಜೈಲಿಗೆ ಕಳುಹಿಸುವಂತೆ ಆದೇಶ ಹೊರಡಿಸಿದೆ.
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೨೨ರ ಸೆ. ೧ರಂದು ಮುರುಘಾ ಶ್ರೀ ಬಂಧನವಾಗಿತ್ತು. ಸುಮಾರು ೧೪ ತಿಂಗಳ ಕಾಲ ಜೈಲಿನಲ್ಲಿದ್ದ ಮುರುಘಾ ಶ್ರೀ ಕಳೆದ ನ. ೧೬ರಂದು ಜೈಲಿನಿಂದ ಹೊರಗೆ ಬಂದಿದ್ದರು. ಇದಾದ ನಂತರ ಚಿತ್ರದುರ್ಗ ಮಠದ ಅಧಿಕಾರವನ್ನು ಹಿಡಿಯಲೂ ಮುಂದಾಗಿದ್ದರು. ಆದರೆ, ಪೋಕ್ಸೋ ಕೇಸ್ ಇದ್ದರೂ ಹೈಕೋರ್ಟ್ನಿಂದ ಜಾಮೀನಿನ ಮೇಲೆ ಹೊರಗೆ ಬಂದು ಸಾಕ್ಷಿ ನಾಶ ಮಾಡುತ್ತಿದ್ದಾರೆ ಎಂದು ಪೋಕ್ಸೋ ಕೇಸ್ ದಾಖಲಿಸಿದ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಮುರುಘಾ ಶ್ರೀಗೆ ಹೈಕೋರ್ಟ್ನಿಂದ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿ ಪುನಃ ಜೈಲಿಗೆ ಕಳಿಸುವಂತೆ ಸೂಚನೆಯನ್ನು ನೀಡಿದೆ.
ಮುರುಘ ಶ್ರೀಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಮುನಃ ಅವರನ್ನು ೪ ತಿಂಗಳ ಕಾಲಾವಧಿಗೆ ಜೈಲಿಗೆ ಕಳುಹಿಸಬೇಕು. ಈ ಅವಧಿಯೊಳಗೆ ಸಂತ್ರಸ್ಥೆಯರು ಹಾಗೂ ಪೋಷಕರ ವಿಚಾರಣೆಗೆ ಮುಗಿಸಬೇಕು. ಒಂದು ವೇಳೆ ಪ್ರಕರಣದ ವಿಚಾರಣೆಯು ಮುಗಿಯದ್ದಿದ್ದ ಪಕ್ಷದಲ್ಲಿ ಇನ್ನೆರಡು ತಿಂಗಳ ಕಾಲ ಜೈಲು ಶಿಕ್ಷೆ ಅವಧಿಯನ್ನು ವಿಸ್ತರಣೆ ಮಾಡಬೇಕು. ಈ ಆದೇಶಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ನಿಂದ ಸೂಚನೆ ನೀಡಲಾಗಿದೆ.