ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ದಿನಗಣನೆ ಆರಂಭವಾಗಿದ್ದು ಮೈಸೂರಿಗೆ ಆಗಮಿಸಿರುವ ಎರಡನೇ ಹಂತದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ.
ಮೈಸೂರಿನ ದೇವರಾಜ ಮೊಹಲ್ಲಾದ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಸಲಾಗಿದೆ. ಇನ್ನು ತೂಕದಲ್ಲಿ ಸುಗ್ರೀವ ಎರಡನೇ ಸ್ಥಾನದಲ್ಲಿದ್ದು, ಅಭಿಮನ್ಯು ನಂತರ ಅತಿ ಹೆಚ್ಚು ತೂಕವನ್ನ ಸುಗ್ರೀವ ಹೊಂದಿದ್ದಾನೆ.
ಐದು ಆನೆಗಳ ತೂಕ ಈ ಕೆಳಕಂಡಂತಿದೆ.
ಪ್ರಶಾಂತ : 4875 ಕೆ.ಜಿ
ಸುಗ್ರೀವ : 5190 ಕೆ.ಜಿ
ಹಿರಣ್ಯ : 2930 ಕೆ.ಜಿ
ಮಹೇಂದ್ರ: 4910 ಕೆ.ಜಿ
ಲಕ್ಷ್ಮಿ : 3485 ಕೆ.ಜಿ
ಇಂದು ತೂಕ ಪರೀಕ್ಷೆ ಬಳಿಕ ಎರಡನೇ ಹಂತದ ಗಜಪಡೆ ಸಂಜೆಯಿಂದ ತಾಲೀಮಿನಲ್ಲಿ ಭಾಗಿಯಾಗಲಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಫ್ ಡಾ ಪ್ರಭುಗೌಡ, ಎರಡನೇ ಹಂತದ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ. ನಿನ್ನೆಯಷ್ಟೇ ಐದು ಆನೆಗಳು ಅರಮನೆ ಅವರಣಕ್ಕೆ ಬಂದಿವೆ. ಅಭಿಮನ್ಯು ನಂತರ ಸುಗ್ರೀವ ಅತಿ ಹೆಚ್ಚು ತೂಕ ಹೊಂದಿದ್ದಾನೆ. ಇಂದು ಸಂಜೆಯಿಂದಲೇ ಎಲ್ಲಾ ಆನೆಗಳು ತಾಲೀಮಿನಲ್ಲಿ ಭಾಗಿಯಾಗುತ್ತವೆ.
ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್ 15ರ ಬಳಿಕ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ. ವರಲಕ್ಷ್ಮಿ ಕ್ಯಾಂಪ್ ನ ಅತ್ಯಂತ ಹಿರಿಯ ಆನೆಯಾಗಿದ್ದು, ಅವಶ್ಯಕತೆ ಇದ್ದಾಗ ಮಾತ್ರ ವರಲಕ್ಷ್ಮಿ ಆನೆಯನ್ನ ತಾಲೀಮಿಗೆ ಕರೆ ತರಲಾಗುತ್ತದೆ ಎಂದು ತಿಳಿಸಿದರು.