ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಗಳಿಂದ ಹಬ್ಬಗಳ ಸಮಯದಲ್ಲಿ ಹೆಚ್ಚು ಬೇಡಿಕೆಯ ಟಿಕೇಟ್ ಗಾಗಿ ಪ್ರಯಾಣಿಕರನ್ನು ಶೋಷಿಸುವ ಅನಧಿಕೃತ ವ್ಯಕ್ತಿಗಳ ಸಂಚು ಭೇದ
ಮೈಸೂರು: ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಅನಧಿಕೃತ ‘ಟೌಟ್’ಗಳನ್ನು ಹತ್ತಿಕ್ಕಲು ಮತ್ತು ಹಬ್ಬದ ಸೀಸನ್ನಲ್ಲಿ ಅಧಿಕೃತ ಪ್ರಯಾಣಿಕರ ಶೋಷಣೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೈಸೂರಿನ ಆರ್ಪಿಎಫ್ ವಿಭಾಗೀಯ ಸಂರಕ್ಷಣಾ ಕಮಿಷನರ್ ಶ್ರೀ ಜೆ. ಕೆ. ಶರ್ಮಾ ಅವರ ಮಾರ್ಗದರ್ಶನದಲ್ಲಿ ಕ್ರೈಂ ಇನ್ಸ್ಪೆಕ್ಟರ್ ಶ್ರೀ ಎಂ. ನಿಷಾದ್, ಸಬ್ ಇನ್ಸ್ಪೆಕ್ಟರ್ ಶ್ರೀ ಬಿ. ಚಂದ್ರಶೇಖರ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಾದ ಶ್ರೀ ವೆಂಕಟೇಶ್ ಮತ್ತು ಈಶ್ವರ್ ರಾವ್ ನೇತೃತ್ವದ ವಿಶೇಷ ತಂಡ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರಿ ದಾಳಿ ನಡೆಸಿತು.
ದಾಳಿಯ ಸಮಯದಲ್ಲಿ ಮೂರು ಸೈಬರ್ ವಲಯಗಳನ್ನು ಗುರಿಯಾಗಿಸಲಾಗಿ, ಇದರ ಪರಿಣಾಮವಾಗಿ ಅನಧಿಕೃತ ಟಿಕೆಟಿಂಗ್ ತಂಡಗಳ ಕಾರ್ಯಾಚರಣೆಯನ್ನು ಭೇದಿಸಲಾಯಿತು. 2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್ಗಳು ಮತ್ತು 1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ಗಳು, ಪ್ರಿಂಟರ್ಗಳು ಮತ್ತು ಮೊಬೈಲ್ ಫೋನ್ಗಳಂತಹ ಗ್ಯಾಜೆಟ್ಗಳನ್ನು ಆರ್ಪಿಎಫ್ ವಶಪಡಿಸಿಕೊಂಡಿದ್ದೂ, ಇವುಗಳಿಂದ ಆ ತಂಡಗಳು ಇ-ಟಿಕೆಟ್ಗಳನ್ನು ತೆಗೆದುಕೊಂಡು ದುಬಾರಿ ಬೆಲೆಗೆ ಮಾರಲು ಬಳಸುತ್ತಿದ್ದವು.
ಈ ಗ್ಯಾಂಗ್ಗಳು ವಿವಿಧ ಫೋನ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಬಹು ವೈಯಕ್ತಿಕ ಐಡಿಗಳನ್ನು ರಚಿಸುವ ವಿಧಾನವನ್ನು ಬಳಸಿಕೊಂಡಿದ್ದು ಹಬ್ಬಗಳ ಸಮಯದಲ್ಲಿ ವಿಪರೀತ ಬೇಡಿಕೆಯಿದ್ದಾಗ ಅಗತ್ಯವಿರುವ ಪ್ರಯಾಣಿಕರಿಗೆ ಹೆಚ್ಚಿನ ಕಮಿಷನ್ಗಳನ್ನು ವಿಧಿಸಿ ಹೆಚ್ಚಿನ ಬೆಲೆಗೆ ಮಾರಲು ಅನಧಿಕೃತ ಇ-ಟಿಕೆಟ್ಗಳನ್ನು ಉತ್ಪಾದಿಸುತ್ತಿದ್ದವು.
ಅಂತಹ ಶೋಷಣೆಯಿಂದ ಪ್ರಯಾಣಿಕರ ರಕ್ಷಣೆಗಾಗಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿಯಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು, ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡ ಅನಧಿಕೃತ ‘ಟೌಟ್’ಗಳು ಮತ್ತು ಟ್ರಾವೆಲ್ ಏಜೆಂಟ್ಗಳ ವಿರುದ್ಧ ಆರ್ಪಿಎಫ್ ದಾಳಿಗಳನ್ನು ನಡೆಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು. ಈ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಟ್ರಾವೆಲ್ ಏಜೆಂಟ್ಗಳೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವಂತೆ ಮತ್ತು ಅವರ ದುರಾಸೆಗೆ ಬಲಿಯಾಗದಂತೆ ಅವರು ಪ್ರಯಾಣಿಕರನ್ನು ಕೋರಿದರು.
ವಿಶೇಷ ಕಾರ್ಯಾಚರಣೆ ವೇಳೆ ಮೂವರನ್ನು ಬಂಧಿಸಲಾಗಿದೆ. ಶ್ರೀ ರೇಣುಕಾ ಸೈಬರ್ ಸೆಂಟರ್ನ 31 ವರ್ಷದ ಗಣೇಶ್ ರಾಮ್ ನಾಯ್ಕ್, ಶ್ರೀ ಕಮ್ಯುನಿಕೇಷನ್ ಮೊಬೈಲ್ ಸೇಲ್ಸ್ನಿಂದ 36 ವರ್ಷದ ರೇವಣ್ಣಪ್ಪ ಮತ್ತು ಆರ್ಯ ಸೈಬರ್ ವಲಯದಿಂದ 46 ವರ್ಷದ ಪ್ರಶಾಂತ್ ಹೆಗಡೆ ಬಂಧಿತರು.
ದಾಳಿಯಲ್ಲಿ ಭಾಗಿಯಾಗಿದ್ದ ಆರ್ಪಿಎಫ್ ತಂಡದಲ್ಲಿ ಹೆಡ್ ಕಾನ್ಸ್ಟೆಬಲ್ ಶ್ರೀ ಡಿ ಚೇತನ್, ಕಾನ್ಸ್ಟೆಬಲ್ ಶ್ರೀ ಎ. ಪ್ರವೀಣ್, ಕಾನ್ಸ್ಟೆಬಲ್ ಶ್ರೀ ಇಳಂಗೋವನ್, ಮಹಿಳಾ ಕಾನ್ಸ್ಟೇಬಲ್ ಶ್ರೀಲಕ್ಷ್ಮಿ ಪಿ. ಸೋಮನ್ ಮತ್ತು ಮಹಿಳಾ ಕಾನ್ಸ್ಟೇಬಲ್ ಎಂ.ಎಸ್. ತನುಜಾ ಇದ್ದರು.