ಮಂಡ್ಯ: ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಿರಂತರ ಹೋರಾಟ ನಡೆಯುತ್ತಿದ್ದು, ಧರಣಿ ನಿರತರನ್ನು ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್, ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ಭೇಟಿಯಾಗಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನಲೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾ ನಿರತರನ್ನು ಸಚಿವ ಎನ್.ಚಲುವರಾಯಸ್ವಾಮಿ ಭೇಟಿಯಾಗಿ, ಅಹವಾಲು ಆಲಿಸಿದ್ದಾರೆ.
ಈ ವೇಳೆ ಸಚಿವರ ಎದುರೇ ರೈತರು ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ನಾಯಕಿ ಸುನಂದಾ ಜಯರಾಂ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಂಸದರನ್ನ ಮನವಿ ಮಾಡುವಂತದ್ದು ಏನಿದೆ? ಏಕೆ ಎಂಪಿ ಅವರನ್ನು ವಿನಂತಿ ಮಾಡ್ಕೊಂಡ್ರಿ? ಅವರೆಲ್ಲರನ್ನೂ ನಾವು ಗೆಲ್ಸಿ ಕಳಿಸಿರೋದು ನಮ್ಮ ಪರ ನಿಲ್ಲಲಿ ಅಂತಾ. ನಮ್ಮ ಪರ ನಿಲ್ಲಬೇಕಾದ್ದು ಅವರ ಜವಾಬ್ದಾರಿ. ಎಂಪಿ ಅವರು ಒಂದು ಪದವನ್ನು ಸಹ ನುಡಿದಿಲ್ಲ. ನಮ್ಮ ರೈತರ ಋಣದಲ್ಲಿ ಎಂಪಿ ಗೆದ್ದು ಹೋಗಿದ್ದಾರೆ. ಸಂಸದರನ್ನ ಮನವಿ ಮಾಡಬೇಕಾದ ಅವಶ್ಯಕತೆ ಏನೂ ಇಲ್ಲ ಎಂದು ಕಿಡಿಕಾರಿದ್ದಾರೆ.
ನಿಮಗೂ ಅಷ್ಟೇ ಗೌರವ ಕೊಡ್ತಿದ್ದೇವೆ. ನೀವು ಸರ್ಕಾರದ ಒಂದು ಭಾಗ. ನಿಮ್ಮ ಸಮಾಧಾನದ ಮಾತುಗಳನ್ನ ನಾವು ಕೇಳಿ ಸಾಕಾಗಿದೆ. ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ನಿಲ್ಲಿಸಿ. ಪ್ರಾಧಿಕಾರದ ಆದೇಶ ಇರಲಿ ಫಸ್ಟ್ ನೀವು ನೀರು ನಿಲ್ಲಿಸಿ. ನಮ್ಮ ಪರವಾದ ಸಮರ್ಥ ವಾದವನ್ನ ಕೋರ್ಟ್ ನಲ್ಲಿ ಮಂಡಿಸಿ ಎಂದು ಆಗ್ರಹಿಸಿದರು.
ಇಲ್ಲಿಂದ ಒಬ್ಬ ಹೆಣ್ಣು ಮಗಳು ಹೋಗಿ ತಮಿಳುನಾಡಿನಲ್ಲಿ ನನ್ನದು ರಾಜ್ಯ ಅಂತ ಯಾವ ರೀತಿ ಹೆಗಲು ಕೊಟ್ಟಳು. ನೀರಾವರಿ ಸಚಿವರ ಜವಾಬ್ದಾರಿ ಬಹಳ ದೊಡ್ಡದಿದೆ. ರೈತರ ಬದುಕು ನಿಮ್ಮ ಕೈಯಲ್ಲಿದೆ, ನಿರೀಕ್ಷೆ ಇಟ್ಟಿದ್ದೇವೆ. ಕಾವೇರಿ ನದಿ ನೀರನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ. ಕೋರ್ಟಿನ ಮುಂದೆ ವಾಸ್ತವ ಸ್ಥಿತಿ ತೆರೆದಿಡುವ ಕೆಲಸ ಮಾಡಿ ಎಂದು ಮನವಿ ಮಾಡಿದರು.