ಹನಗೋಡು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡದ ಸದಸ್ಯರು ಮಂಗಳವಾರ ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಹಾಗೂ ಭೌತಿಕ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ನ್ಯಾಕ್ ತಂಡದ ಚೇರ್ಮನ್ ಡಾ.ಜಾವೈದ್ ಅಕ್ತರ್ ಸದಸ್ಯರಾದ ಡಾ.ಸುಧಾಕರ ರೆಡ್ಡಿ, ಡಾ.ಬಾಲಕೃಷ್ಣ ಕಾಂಬ್ಳೆ ಅವರನ್ನು ಪ್ರಾಂಶುಪಾಲ ಡಾ. ಬಸವರಾಜ್ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕಿರಂಗೂರು ಬಸವರಾಜ್ ಬರಮಾಡಿಕೊಂಡರು.
ನ್ಯಾಕ್ ತಂಡದವರೊಂದಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ಜಿ. ಡಿ. ಹರೀಶ್ ಗೌಡ ಅವರು ಸಿಡಿಸಿ ಸಭೆ ನಡೆಸಿ’ ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದ್ದೇನೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾಲೇಜಿನ ವಾತಾವರಣವನ್ನು ಅಣಿಗೊಳಿಸಿದ್ದು, ಇದನ್ನು ಗ್ರಾಮೀಣ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಶಾಸಕರು ತಿಳಿಸಿದರು.
ಪ್ರಾಂಶುಪಾಲರಾದ
ಡಾ. ಬಸವರಾಜ್ ರವರು ನ್ಯಾಕ್ ತಂಡದವರಿಗೆ ಪಿಪಿಟಿ ಮೂಲಕ ಕಾಲೇಜು ನಡೆದುಬಂದ ಹಾದಿ ಹಾಗೂ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಕಾಲೇಜಿನ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾಲೇಜಿನ ಹೊರ ಮತ್ತು ಒಳ ಪ್ರಾಂಗಣವನ್ನು ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಎಲ್ಲರನ್ನು ಮನರಂಜಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನ ಶ್ರೀಧರ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ವೆಂಕಟಪ್ಪ, ಎಚ್.ಆರ್ ರಮೇಶ್, ರಾಘವೇಂದ್ರ ಕೆ ಎಸ್, ಸಂದೀಪ್, ಶಾಂತಮ್ಮ, ಉದಯನ್, ಶ್ರೀನಿವಾಸ್ ಉಪನ್ಯಾಸಕರಾದ ಡಾ. ಬಾಲರಾಜ್, ರಶ್ಮಿ ಅರಸ್, ಪ್ರಕಾಶ್, ದಿನೇಶ್, ಉಮೇಶ್ ,ಗಂಗೂ ಗೋವಿಂದರಾಜು, ವೇಣುಗೋಪಾಲ್, ಅನಿತಾ ಹಾಗೂ ಹಿರಿಯ ವಿದ್ಯಾರ್ಥಿಗಳು ಪೋಷಕರು, ಗ್ರಾಮ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.
