ದಾವಣಗೆರೆ: ಸರ್ವಜಾತಿ ಸಮನ್ವಯ, ಸರ್ವಧರ್ಮ ಪಾಲಕರು, ವಿಶಾಲ ನೀರಾವರಿ ಯೋಜನೆಗಳು ಹಾಗೂ ಬೃಹತ್ ಬೆಂಗಳೂರು ನಿರ್ಮಾಣದಂತಹ ಕಾರ್ಯಗಳಿಂದ ನಾಡಿನಲ್ಲಿ ಪ್ರಖ್ಯಾತಿ ಹೊಂದಿದಂತಹವರು ನಾಡದೊರೆ ಕೆಂಪೇಗೌಡರು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಹೇಳಿದರು.
ಗುರುವಾರ ಜೂ.27 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ನಾಡು ಕಂಡ ಅಪ್ರತಿಮ ಆಡಳಿತಾಗಾರ, ತುಂಬಾ ದೂರದೃಷ್ಠಿಯಿಂದ ನಮ್ಮ ರಾಜ್ಯ, ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿದೇಶಗಳಿಗೆ ಹೋದರೆ ನಮ್ಮವರನ್ನು ಯಾರು ಗುರುತಿಸುವುದಿಲ್ಲ, ಆದರೆ ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದರೆ ಕೂಡಲೇ ನಮ್ಮನ್ನು ಗುರುತಿಸುತ್ತಾರೆ. ಎಲ್ಲರನ್ನೂ ಕೈಬಿಸಿ ಕರೆಯುವಂತೆ ಮಾಡಿರುವ ಖ್ಯಾತಿ ಕೆಂಪೇಗೌಡರದ್ದು, 1510 ಇಸವಿಯಲ್ಲಿ ಜನನ ಹೊಂದಿ 35 ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿ ರಾಜ್ಯದಲ್ಲಿ ಶಾಂತಿ ಹಾಗೂ ಎಲ್ಲ ರೀತಿಯಲ್ಲಿ ಸುಸ್ಥಿರ ಬದುಕಿಗೆ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ.
ಇಂತಹ ಮಹಾತ್ಮರ ಚಿಂತನೆಗಳು ಮತ್ತು ಕಾರ್ಯ ಚಟುವಟಿಕೆಗಳನ್ನು ನಾವು ತಿಳಿದುಕೊಳ್ಳುವ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಅಂದಿನ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ, ಕೆರೆಗಳನ್ನು ನಿರ್ಮಾಣ ಮಡಿ ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಅತೀ ಹೆಚ್ಚು ಉಪಯೋಗವಾಗುವಂತೆ ಮಾಡಿದ್ದಾರೆ. ನಮ್ಮ ರಾಜ್ಯ ಯಾವುದೇ ರೀತಿಯ ಭೂಕಂಪಗಳಿಂದ ಹಾನಿಗೊಳಗಾದೇ ಇರುವ ಸ್ಥಳವನ್ನಾಗಿ ನಿರ್ಮಿಸಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತಾನಾಡಿ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಬೆಂಗಳೂರಿಗೆ ದೊಡ್ಡ ಕೊಡುಗೆಗಳನ್ನು ನೀಡಿ ರಾಜಧಾನಿಯಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ, ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಸರ್ವಜಾತಿಗೆ ಪ್ರಾಮುಖ್ಯತೆ ನೀಡಿದ್ದು, ಜಾತಿ ಮತ್ತು ಕುಲಕಸುಬುಗಳಿಗೆ ಸಂಬಂಧಿಸಿದಂತೆ ಶಟ್ಟಿಪೇಟೆ, ಗೌಡಪೇಟೆ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ ಸುಮಾರು 52 ಪೇಟೆಗಳನ್ನು ಕಟ್ಟಿದ್ದಾರೆ ಎಂದರು.
ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಪಾಲಿಕೆ ಉಪಮೇಯರ್ ಯಶೋಧ ಹೆಗ್ಗಪ್ಪ, ಡಿಡಿಪಿಐ ಕೊಟ್ರೇಶ್.ಜಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪ, ಜಿಲ್ಲಾ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಅಶೋಕ ಗೌಡ್ರು, ದೂಡಾ ಆಯುಕ್ತರಾದ ಬಸವನಗೌಡ ಕೋಟೂರು, ತಹಶೀಲ್ದಾರ್ ಡಾ.ಅಶ್ವಥ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.