ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ, ಮಂಡ್ಯ ಸಂಸದ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ನಾಗಮಂಗಲಕ್ಕೆ ಭೇಟಿ ನೀಡಿದರು.
ಗಲಭೆಯಿಂದ ಹಾನಿಗೊಳಗಾದ ಅಂಗಡಿಗಳಿಗೆ ಭೇಟಿ ನೀಡಿದ ಹೆಚ್ಡಿಕೆ ಅಂಗಡಿ ಮಾಲೀಕರ ಅಳಲು ಆಲಿಸಿದರು. ಭೇಟಿ ವೇಳೆ ಹೆಚ್ಡಿಕೆಗೆ ಮಾಜಿ ಶಾಸಕರಾದ ಸುರೇಶ್ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.
ಘಟನೆ ನಡೆದ ಬುಧವಾರ ರಾತ್ರಿಯೇ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವೇ ನಾಗಮಂಗಲ ಗಲಭೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯುತವಾಗಿ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಎಬ್ಬಿಸಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ದುಸ್ಸಾಹಸಕ್ಕೆ ಕೈ ಹಾಕಿರುವುದು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಗಣೇಶ ವಿಸರ್ಜನೆಗೆ PSI ರವಿಕುಮಾರ್ ಬಳಿ ಅನುಮತಿ ಪಡೆದುಕೊಂಡಿದ್ದಾರೆ. ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಲಾಗಿದೆ. ಕಳೆದ ವರ್ಷ ಕೂಡ ಇಂತ ಘಟನೆ ನಡೆದಿದೆ ಅಂತ ಮಾಧ್ಯಮ, ಪೊಲೀಸರು ಹೇಳಿದ್ದಾರೆ. ಇಲ್ಲಿ ಅಂತ ಅಲ್ಲಾ ಎಲ್ಲಾ ಕಡೆ ಡಿಜೆ ಹಾಡನ್ನ ಹಾಕ್ತಾರೆ. ಮೆರವಣೆಗೆ ನಡೆಯುವಾಗ ಘೋಷಣೆ ಕೂಗುವಂತದ್ದು ನಮ್ಮ ದೇಶದಲ್ಲಿ ನಡೆದುಕೊಂಡು ಬಂದಿದೆ. ಈ ರೀತಿ ಘೋಷಣೆಗಳು ಘರ್ಷಣೆಗೆ ಎಡೆಮಾಡಿಕೊಡ್ತವೆ.
ಕೆಲ ಪಕ್ಷಗಳು ಒಂದೊಂದು ಸಮಾಜ ಓಲೈಕೆ ಮಾಡಿಕೊಳ್ಳೋದು ರಾಜ್ಯದಲ್ಲಿ ಕಾಣ್ತಿದೆ. ಕೈ ನಾಯಕರು ಒಂದು ಸಮಾಜವನ್ನ ಓಲೈಕೆ ಮಾಡುವ ರಾಜಕಾರಣ ಮಾಡಬಾರದು. ಈ ರೀತಿ ಓಲೈಕೆ ರಾಜಕಾರಣ ನನ್ನ ಜೀವನದಲ್ಲಿ ಎಂದು ಮಾಡಿಲ್ಲ. ಕೈ ನಾಯಕರು ಇದರಲ್ಲಿ ರಾಜಕೀಯ ಬೇಡ ಎಂದಿದ್ದಾರೆ ಇದಕ್ಕೆ ನನ್ನ ಸ್ವಾಗತ ಇದೆ. ಆದ್ರೆ ಕೈ ನಾಯಕರು ಏನ್ ಮಾಡ್ತಿದ್ದಾರೆ? ಅವ್ರ ನಡುವಳಿಕೆ ಹೇಗಿದೆ. ಈ ಭಾಗದ ಜನರ ಬದುಕಿನಲ್ಲಿ ರಾಜಕೀಯ ಸಂಘಟನೆಗಾಗಿ ಬದುಕನ್ನ ಚಿದ್ರ ಮಾಡಬೇಡಿ ಎಂದು ಹೇಳಿದರು.
ಗೃಹ ಸಚಿವರಿಗೆ ಇದು ಸಣ್ಣ ವಿಷಯ– ಎಚ್ಡಿಕೆ ಕಿಡಿ
ಗೃಹ ಸಚಿವರು ಇದನ್ನ ಸಣ್ಣ ವಿಚಾರ ಅಂತಾರೆ. ಪರಮೇಶ್ವರ್ ಅವರೆ ಈ ರೀತಿ ಹೇಳಿಕೆ ಕೊಡೊ ಮೂಲಕ ನೀವು ಯಾವ ಸಂದೇಶ ನೀಡ್ತಿದ್ದೀರಿ. ಇಂತ ಸೂಕ್ಷ್ಮ ಮೆರವಣಿಗೆ ಇದ್ದಾಗ ತಕ್ಷಣ ಕ್ರಮ ಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿತ್ತಾ? ಸ್ಥಳ ವೀಕ್ಷಣೆ ವೇಳೆ ವ್ಯವಸ್ಥಿತ ಪ್ಲಾನ್ ಇರೋದು ಗೊತ್ತಾಗ್ತಿದೆ. ಇಲ್ಲಿದ್ದ ರಿಸರ್ವ್ ಪೊಲೀಸರನ್ನ ಬೇರೆಡೆಗೆ ಕಳಿಸ್ತಾರೆ. ಇದನ್ನ ಗೃಸಚಿವರು ಅಥವಾ ಮತ್ಯಾರು ಹೇಳಿದ್ರು. ಪೆಟ್ರೋಲ್ ಬಾಂಬ್, ತಲವಾರ್ ಹಿಡಿದು ಓಡಾಡೋದು ಮಾಧ್ಯಮದವ್ರಿಗೆ ಗೊತ್ತಾದ ಕೂಡಲೇ ಬರ್ತಾರೆ ಆದ್ರೆ ಸರ್ಕಾರ ಏನ್ ಮಾಡ್ತಿತ್ತು. ಲೋಕಲ್ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡ್ತಿದ್ದಾರೆ ಅಂತ ಗೊತ್ತಾಗ್ತಿದೆ ಎಂದು ಕಿಡಿ ಕಾರಿದರು.
ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆಯೇ ಆ ಕೋಮಿನ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ.
ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಲಿ
ಪಕ್ಷ ಮತ್ತು ರಾಜ್ಯ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ. ಇಂತಹ ಓಲೈಕೆ, ತುಷ್ಟೀಕರಣ ರಾಜಕಾರಣ ನಿಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ದಿನಗಳು ದೂರವಿಲ್ಲ.
ಸಾರ್ವಜನಿಕರು ಶಾಂತಿ ಕಾಪಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ. ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು. ಅಲ್ಲದೆ; ಈ ಪ್ರಕರಣ ನೆಪದಲ್ಲಿ ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ಪೊಲೀಸರು ದರ್ಪ ತೋರಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದರು.