ಮಂಡ್ಯ: ಸಮಸಮಾಜದ ಕನಸು ಹೊತ್ತು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಹಿಂದುಳಿದ ವರ್ಗದ ಜನರ ಏಳಿಗೆಗಾಗಿ ಮೀಸಲಾತಿಯನ್ನು ಜಾರಿಗೆ ತಂದ ಸಮ ಸಮಾಜದ ಹಾಗೂ ಸಾಮಾಜಿಕ ನ್ಯಾಯದ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಬುಧುವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಉದ್ಘಾಟನಾ ನುಡಿಯನ್ನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದು ನಮ್ಮೊಡನೆ ಇಲ್ಲದಿದ್ದರೂ ಅವರು ನಮ್ಮ ಮುಂದಿನ ಪೀಳಿಗೆಗೂ ಅವರನ್ನು ಸ್ಮರಿಸುವಂತಹ ಕೊಡುಗೆ ನೀಡಿದ್ದಾರೆ. ನಮ್ಮ ಭಾಗದ ಜನರು ಪ್ರತಿನಿತ್ಯ ಅವರನ್ನು ನೆನೆಯುವಂತಹ ಸೇವೆ ಸಲ್ಲಿಸಿದ್ದಾರೆ. ಬ್ರಿಟಿಷರ ಕಾಲದಲ್ಲೂ ಸಹ ಸುಮಾರು 600 ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸಿದ ದಿಮಂತ ನಾಯಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಹೇಳಿದರು.
ಮೈಸೂರು, ಮಂಡ್ಯ ಹಾಸನ ಪ್ರಾಂತ್ಯಗಳ ಜನರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರವನ್ನು ಮನೆಗಳಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಭಾಗದ ಜನರು ನಾಡಗೀತೆಗೆ ಸಿಗುವಷ್ಟೆ ಗೌರವವನ್ನು “ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್” ಹಾಡಿಗೆ ನೀಡುತ್ತಾರೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಾರಣ ಇದು ಜಾಗತಿಕವಾಗಿ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೆ ಹಾಗೂ ಏಷ್ಯಾದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಬೀದಿ ದೀಪವನ್ನು ಅಳವಡಿಸಿದ ನಗರ ಎಂಬ ಕೀರ್ತಿ ಬರಲು ಕಾರಣ ನಾಲ್ವಡಿ ಕೃಷ್ಣರಾಜರು ಎಂದು ಹರ್ಷ ವ್ಯಕ್ತಪಡಿಸಿದರು.
ಏಷ್ಯಾದಲ್ಲೇ ಮೊದಲ ಬಾರಿಗೆ ಶಿವನಸಮುದ್ರಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರು, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸಿದರು, ಅಂದಿನ ಕಾಲದಲ್ಲೇ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು, ಇವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ “ರಾಜರ್ಷಿ” ಎಂದು ಬಿರುದು ನೀಡಿ ಗೌರವಿಸಿದರು ಎಂದರು.
ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ ಅವರು ಮಾತನಾಡಿ ಇಂದು ನಮ್ಮ ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಬಹು ಮುಖ್ಯ ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು. ಶಾಲಾ ಮಕ್ಕಳ ಪ್ರವಾಸಕ್ಕೆ ಬೇರೆಲ್ಲೂ ಹೋಗುವ ಅಗತ್ಯವಿಲ್ಲ ಮೈಸೂರಿನ ಅರಮನೆ, ಮೃಗಾಲಯ, ಕನ್ನಂಬಾಡಿ ಅಣೆಕಟ್ಟು, ಮೈಸೂರು ವಿಶ್ವವಿದ್ಯಾನಿಲಯವನ್ನು ತೋರಿಸಿ ಮೈಸೂರು ಒಂದು ಪುಟ್ಟ ಪ್ರಪಂಚ ಎಂದರು.
ನAತರ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎಸ್. ಶಿವರಾಮು ಅವರು ಮಾತನಾಡಿ 1902 ರಿಂದ 1940 ರ ವರೆಗೆ ಸುಮಾರು 38 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಆಳಿದ ಹೆಗ್ಗಳಿಕೆ ನಾಲ್ವಡಿ ಕೃಷ್ಣರಾಜರಿಗಿದೆ. ಅವರ ಆಳ್ವಿಕೆಯ ಕಾಲವನ್ನು ಅನೇಕ ಬರಹಗಾರರು ಮೈಸೂರು ಸಂಸ್ಥಾನದ “ಸುವರ್ಣ ಯುಗ”ವೆಂದು ಉಲ್ಲೆಖಿಸಿದ್ದಾರೆ ಎಂದು ತಿಳಿಸಿದರು.
ನಾವೆಲ್ಲರೂ ಸಮೃದ್ಧವಾಗಿ ಜೀವನ ಸಾಗಿಸಲು ಮುಖ್ಯ ಕಾರಣ ನಾಲ್ವಡಿ ಕೃಷ್ಣರಾಜರು ನಿರ್ಮಿಸಿದ ಕನ್ನಂಬಾಡಿ ಅಣೆಕಟ್ಟು, ಮೊದಲು ನಮ್ಮ ಭಾಗದಲ್ಲಿ ನೀರಿನ ಅಭಾವ ಇತ್ತು, ರೈತರು ಕೃಷಿ ಮಾಡಲು ಸಮರ್ಪಕವಾಗಿ ನೀರು ದೊರೆಯುತ್ತಿರಲ್ಲಿಲ್ಲ ಕಾವೇರಿ ನೀರು ವ್ಯಾರ್ಥವಾಗಿ ಹರಿಯುತ್ತಿತ್ತು, ಇದನ್ನು ಅರಿತ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ತಂತ್ರಿಕ ಮತ್ತು ನೀರವಾರಿ ತಜ್ಞರೊಂದಿಗೆ ಚರ್ಚಿಸಿ ಕನ್ನಂಬಾಡಿ ಬಳಿ ಅಣೆಕಟ್ಟು ನಿರ್ಮಿಸಲು ನೀಲಿ ನಕ್ಷೆ ಸಿದ್ಧಪಡಿಸಲು ತಿಳಿಸಿದರು.
ಕನ್ನಂಬಾಡಿ ಮೊಟ್ಟ ಮೊದಲ ನೀಲಿ ನಕ್ಷೆ ಸಿದ್ಧಪಡಿಸಿದ್ದು ಕ್ಯಾಪ್ಟನ್ ಬರ್ನೋಲ್ಡ್ ದಾವೂಸ್ ಎಂಬುವವರು ಅಣೆಕಟ್ಟಿನ ಕಾರ್ಯ ನಿರ್ವಹಿಸುತ್ತಿರುವಾಗ ಅವರು ಅಸುನೀಗುತ್ತಾರೆ. ನಂತರ ಸರ್. ಎಂ ವಿಶ್ವೇಶ್ವರಯ್ಯ ಅಣೆಕಟ್ಟಿನ ಕಾರ್ಯ ಕೈಗೆತ್ತಿಕೊಳ್ಳುತ್ತಾರೆ. ಕಾಮಗಾರಿ ವೆಚ್ಚವೆ ಸುಮಾರು 2 ಕೋಟಿ 75 ಲಕ್ಷ ಎಂದು ಅಂದಾಜಿಸಲಾಗುತ್ತದೆ ಎಂದು ಹೇಳಿದರು.
ಮೈಸೂರು ಸಂಸ್ಥಾನದ ಒಟ್ಟು ಆದಾಯವೇ 2 ಕೋಟಿ 75 ಲಕ್ಷ ಇರುವುದಿಲ್ಲ ಎಂದು ಚಿಂತಿಸುತ್ತಿರುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪತ್ನಿ ತಮ್ಮ ಒಡವೆ ವಜ್ರ ವೈಡೂರ್ಯಗಳನ್ನು ನೀಡಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸೂಚಿಸುತ್ತಾರೆ. ಅಣೆಕಟ್ಟು ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರನ್ನೂ ನಾವು ಇಂದು ನೆನೆಯಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್ ಬಿ.ವಿ ನಂದೀಶ್, ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್ ನಾರಾಯಣ, ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ. ಎಲ್.ಸಂದೇಶ್ ಮುಖಂಡರುಗಳಾದ ಎಸ್ ನಾರಾಯಣ್, ಕೃಷ್ಣ, ಲಲಿತಾ ಶಿವರುದ್ರ ಸ್ವಾಮಿ, ಅಮ್ಜದ್ ಪಾಷಾ, ಧನಂಜಯ, ಬಿ.ಎಂ ಅಪ್ಪಾಜಪ್ಪ , ಎಂ .ಸಿ ಲಂಕೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆ
ಪುಷ್ಪಾಲಂಕೃತ ರಥದ ಮೇಲೆ ಇರಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಭಾವಚಿತ್ರಕ್ಕೆ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಾಹಯಕರಾದ ಡಾ. ರೋಹಿಣಿ ಅವರು ಪುಷ್ಪಾರ್ಚನೆ ನೆರವೇರಿಸಿ, ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಡೊಳ್ಳು ಕುಣಿತದೊಂದಿಗೆ ಮೈಸೂರು- ಬೆಂಗಳೂರು ಹೆದ್ದಾರಿಯ ಮೂಲಕವಾಗಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ವರೆಗೂ ಸಾಗಿತು.