ಮೈಸೂರು: ನಾಪತ್ತೆಯಾಗಿದ್ದ ಮೂವರು ಬಾಲಕಿಯರು ಪತ್ತೆಯಾಗಿದ್ದಾರೆ. ನಂಜನಗೂಡು ನಗರದ ಅಶೋಕಪುರಂ ನಿವಾಸಿ ಸಿದ್ಧರಾಜು ಅವರ ಮಗಳು ಲಾವಣ್ಯ (11), ಮುದ್ದೇಶ್ ಅವರ ಮಗಳು ಅಮೂಲ್ಯ (10), ಬಂಗಾರು ಅವರ ಮಗಳು ಯಶು (10) ನಾಪತ್ತೆಯಾಗಿದ್ದರು.
ರವಿವಾರ ಮಧ್ಯಾಹ್ನ ಮನೆ ಬಳಿಯೇ ಆಟವಾಡುತ್ತಿದ್ದ ಮೂವರು ಸಂಜೆಯಾದರು ಮನೆಗೆ ವಾಪಸ್ ಬಂದಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಿದ್ದರಾದರೂ ಮಕ್ಕಳ ಸುಳಿವು ಮಾತ್ರ ಸಿಕ್ಕಿಲ್ಲ. ಇದರಿಂದ ಆತಂಕಕ್ಕೊಳಗಾದ ಪೋಷಕರು ನಂಜನಗೂಡು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ತಂಡ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇನ್ಸ್ಪೆಕ್ಟರ್ ರವೀಂದ್ರ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮಕ್ಕಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದರು.
ಮೂವರು ಮಕ್ಕಳು ಮೈಸೂರಿನಿಂದ ಹಾಸನಕ್ಕೆ ಹೋಗಿ ಅಲ್ಲಿಂದ ಕುಕ್ಕೆ ಸುಬ್ರಮಣ್ಯ ಬಸ್ ಹತ್ತಿದ್ದಾರೆ. ಅಲ್ಲಿಂದ ಮರಳಿ ಸರಗೂರು ತಾಲೂಕಿನಲ್ಲಿರುವ ಯಶು ಅವರ ಅಜ್ಜಿ ಮನೆಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಕಾಣೆಯಾಗಿರುವ ಬಗ್ಗೆ ಆತಂಕಗೊಂಡಿದ್ದ ಪೋಷಕರು ನಿರಾಂತಕಗೊಂಡಿದ್ದಾರೆ.