ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಪಂ ವ್ಯಾಪ್ತಿಯ ಹುಲಸಗುಂದಿ ಗ್ರಾಮದಲ್ಲಿ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಗುಂಡ್ಲುಪೇಟೆ: ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ಉತ್ತಮವಾಗಿರಿಸಬೇಕು ಎಂಬ ಉದ್ಧೇಶದಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಸೌಲಭ್ಯವನ್ನು ಕಾರ್ಮಿಕರು ಬಳಕೆ ಮಾಡಿಕೊಳ್ಳಬೇಕೆಂದು ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಸಲಹೆ ನೀಡಿದರು.
ತಾಲೂಕಿನ ಭೀಮನಬೀಡು ಗ್ರಾಪಂ ವ್ಯಾಪ್ತಿಯ ಹುಲಸಗುಂದಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೆ.ಎಚ್.ಪಿ.ಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕುಟುಂಬಗಳ ಜೀವನದಾರ ಸುಧಾರಣೆಗೆ ವರ್ಷದಲ್ಲಿ 100 ದಿವಸ ಕೆಲಸ ಖಾತ್ರಿ ಪಡಿಸುತ್ತಿದ್ದು, ಕಾಯಕದೊಂದಿಗೆ ಆರೋಗ್ಯವನ್ನು ಉತ್ತೇಜಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಬಿ.ಪಿ, ಶೂಗರ್ ಸೇರಿದಂತೆ ಇನ್ನಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹುಲಸಗುಂದಿ ಗ್ರಾಮದಲ್ಲಿ 200 ಜಾಬ್ ಕಾರ್ಡ್ಯಿದ್ದು, ಅದರಲ್ಲಿ 450 ಜನರು ನರೇಗಾ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಪ್ರತಿಯೊಬ್ಬರು ಸಹ ಉತ್ತಮ ಆರೋಗ್ಯ ಹೊಂದಲಿ ಎಂಬ ಉದ್ದೇಶದಿಂದ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಯಾವುದೇ ಸಮಸ್ಯೆಯಿದ್ದರೂ ಸಹ ಕಾರ್ಮಿಕರು ತಪಾಸಣೆಗೆ ಒಳಗಾಗಿ ಚಿಕಿತ್ಸೆ ಹಾಗೂ ಔಷಧಿ ಪಡೆಯಬಹುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ರಮೇಶ್, ಮಹದೇವೇಗೌಡ, ಪಿಡಿಓ ಭೋಜೇಶ್, ಲೆಕ್ಕ ಸಹಾಯಕ ಮಹದೇವಗೌಡ, ಸಮುದಾಯ ಆರೋಗ್ಯ ಅಧಿಕಾರಿ ಪೂಜಾ, ಅಶ್ವಿನಿ, ನರೇಗಾ ಕಾಯಕಬಂದು ವಿನೋದ ಸೇರಿದಂತೆ ಇತರರು ಹಾಜರಿದ್ದರು.