ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಹೈಕಮಾಂಡ್ ಅವರ ಪರ ಇದ್ದರೂ ಈ ಸ್ಥಾನದಲ್ಲಿ ಮುಂದುವರಿಯಲು ಬರಲ್ಲ. ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡ್ತೀವಿ ಅಂತ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಡುಗಿದರು.
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ದೇಶದ ಕಾನೂನು ಎಷ್ಟು ಗಟ್ಟಿಯಾಗಿದೆ ಅನೋದು ಕೋರ್ಟ್ ಇಂದಿನ ಆದೇಶದಿಂದ ಖಾತ್ರಿಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸಹ ಇದರಿಂದ ಜನ ಅರ್ಥಮಾಡಿಕೊಂಡಿದ್ದಾರೆ. ಈ ದೇಶದ ಕಾನೂನನ್ನು ಧಿಕ್ಕರಿಸಿ ಮಾಡುವ ಯಾವುದೇ ಪ್ರಯತ್ನಗಳು ಸಹ ಸಾಂದರ್ಭಿಕವಾಗಿ ತತಕ್ಷಣಕ್ಕೆ ಅವರಿಗೆ ಒಳ್ಳೆಯದಾಗಬಹುದು. ಆದ್ರೆ ದೀರ್ಘಕಾಲವಾಗಿ ಇರಲ್ಲ. ಕಾನೂನನ್ನು ಮುರಿಯುವವರಿಗೆ, ವಿರೋಧಿಸುವವರಿಗೆ ನ್ಯಾಯ ಸಿಗ್ಲಲ ಅನ್ನೋದನ್ನ ಹೈಕೋರ್ಟ್ ಆದೇಶ ಎತ್ತಿಹಿಡಿದಿದೆ ಎಂದು ಹೇಳಿದರು.
ಸಿಎಂ ಕುಟುಂಬವೇ ಇಂತಹ ಅವ್ಯವಹಾರದಲ್ಲಿ ತೊಡಗಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರು 2 ಬಾರಿ ಡಿಸಿಎಂ ಆಗಿದ್ದವರು, ವಿಪಕ್ಷ ನಾಯಕರಾಗಿದ್ದವರು. 2ನೇ ಬಾರಿಗೆ ಮುಖ್ಯಮಂತ್ರಿ ಸಹ ಆಗಿದ್ದಾರೆ. ಅವರು ತಮ್ಮದೇ ಅಲ್ಲದ ಮುಡಾದ ಭೂಮಿಗೆ ಪರಿಹಾರ ಕೇಳಿದ್ದು ತಪ್ಪು, ಇದರ ವಿರುದ್ಧ ಬೆಂಗಳೂರಿನ ಮೈಸೂರಿನ ವರೆಗೆ ಬಿಜೆಪಿ ದೊಡ್ಡ ಹೋರಾಟ ಬಯಲಿಗೆಳೆಯುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ನಿಮ್ಮ ಹೈಕಮಾಂಡ್ ಸಪೋರ್ಟ್ ನಿಮಗಿದ್ದರೆ, ಸಿಎಂ ಮಾಡಬಹುದು ಅಷ್ಟೇ. ನ್ಯಾಯಾಲಯದಿಂದ ಪಾರು ಮಾಡೋಕೆ ಆಗಲ್ಲ. ಅವರಿಗೆ ನ್ಯಾಯಾಲಯ, ವ್ಯವಸ್ಥೆ, ಅಂಬೇಡ್ಕರ್, ಸಂವಿಧಾನದ ಬಗ್ಗೆ ಗೌರವ ಇದ್ದರೇ ರಾಜೀನಾಮೆ ಕೊಟ್ಟೇ ಕೊಡ್ತಾರೆ ಎಂದು ನುಡಿದರು.
ಕಾಂಗ್ರೆಸ್ ಕಾಲದಲ್ಲೂ ಬೇಕಾದಷ್ಟು ಗೌರ್ನರ್ ಬಂದು ಹೋಗಿದ್ದಾರೆ. ಆಗ ಅವರನ್ನ ಕಂಟ್ರೋಲ್ ಮಾಡುತ್ತಿದ್ದದ್ದು ಯಾರು? ಈಗ ರಾಜ್ಯಪಾಲರನ್ನು ಬಿಜೆಪಿಯವರು ಕಂಟ್ರೋಲ್ ಮಾಡ್ತಿದ್ದಾರೆ ಅನ್ನೋದು ಆರೋಪವಾದ್ರೆ, ನ್ಯಾಯಾಲಯವನ್ನ ಯಾರು ಕಂಟ್ರೋಲ್ ಮಾಡ್ತಾರೆ? ನ್ಯಾಯಾಲಯವನ್ನ ಕಂಟ್ರೋಲ್ ಮಾಡಲು ಸಾಧ್ಯವೇ ಎಂದು ತಿರುಗೇಟು ನೀಡಿದರು.