ಮಂಗಳೂರು (ದಕ್ಷಿಣ ಕನ್ನಡ) : ನವೋದಯ ಸ್ವಸಹಾಯ ಗುಂಪುಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಘಟನೆ ಹಾಗೂ ಜನಜಾಗೃತಿ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ.
ಮೇ ಹತ್ತರಂದು ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಮಂಗಳೂರು ನಗರದಲ್ಲಿಂದು ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು. ಸುಮಾರು 3000ದಷ್ಟು ಬಸ್ಗಳಲ್ಲಿ ಜನ ವಿವಿಧ ಕಡೆಗಳಿಂದ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ.
‘ನವೋದಯ ‘ರಜತ ಸಂಭ್ರಮ’ ಸಮಾರಂಭವು ಮೇ 10ರ ಬೆಳಗ್ಗೆ 10.30ಗಂಟೆಗೆ ಮಂಗಳೂರಿನ ಬಂಗ್ರ ಕೂಳೂರುನಲ್ಲಿರುವ ಗೋಲ್ಡ್ ಫಿಂಚ್ ಸಿಟಿ ಯಲ್ಲಿ ಅದ್ದೂರಿಯಲ್ಲಿ ಹಾಗೂ ಚಾರಿತ್ರಿಕ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಚಾರಿತ್ರಿಕ ಸಮಾವೇಶದಲ್ಲಿ ಸುಮಾರು 1.5 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಲಿದ್ದು, ಈ ಸಮಾವೇಶ ದೇಶಕ್ಕೆ ಮಾದರಿಯಾಗುವ ಸಮಾವೇಶ ಆಗಲಿದೆ.
ಈ ಅರ್ಥಪೂರ್ಣ ರಜತ ಸಂಭ್ರಮವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ನವೋದಯ ರಜತ ಸಂಭ್ರಮದ ನೆನಪಿಗಾಗಿ ವಿಶಿಷ್ಟ ರೀತಿಯ ಲಾಂಛನವನ್ನು ಕರ್ನಾಟಕದ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಬಿಡುಗಡೆಗೊಳಿಸಲಿದ್ದಾರೆ ಎಂದರು.