ಹೆಬ್ರಿ: ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್ಕೌಂಟರ್ ನಡೆದ ನಾಡ್ಪಾಲಿನ ಪೀತುಬೈಲಿಗೆ ಪ್ರಜಾಸತ್ತಾತ್ಮಕ ಹಕ್ಕುಗಳ ಸಂಘಟನೆಗಳ ಸಮನ್ವಯ ತಂಡದ (ಸಿಡಿಆರ್ಒ) ನೇತೃತ್ವದಲ್ಲಿ ಪಿ.ಡಿ.ಎಫ್ ಕರ್ನಾಟಕ, ಸಿಪಿಡಿಆರ್ ತಮಿಳುನಾಡು, ಸಿ.ಎಲ್.ಸಿ ಆಂಧ್ರಪ್ರದೇಶ ಸಂಘಟನೆಗಳ ಸತ್ಯಶೋಧನಾ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.
ಬುಡಕಟ್ಟು ಸಮುದಾಯದ ವಿಕ್ರಂ ಗೌಡ ಅವರನ್ನು ಎಎನ್ಎಫ್ ತಂಡದವರು ಯೋಜನೆ ರೂಪಿಸಿಕೊಂಡು ಹತ್ಯೆ ಮಾಡಿದ್ದಾರೆ. ಇದೊಂದು ನಕಲಿ ಎನ್ಕೌಂಟರ್. ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲದೇ, ಕೆಲವೇ ಬುಡಕಟ್ಟು ಸಮುದಾಯದವರು ಜೀವನ ನಡೆಸುತ್ತಿದ್ದಾರೆ. ಎನ್ಕೌಂಟರ್ ನಡೆದ ಹಾಗೂ ಸುತ್ತಮುತ್ತ ಇರುವ ಎರಡು ಮನೆಗಳು ಎಎನ್ಎಫ್ ತಂಡದ ವಶದಲ್ಲಿದೆ. ಈ ಮನೆಯವರಿಗೆ ನಿರ್ಬಂಧ ಹೇರಲಾಗಿದೆ ಎಂದು ತಂಡ ತಿಳಿಸಿದೆ.
ಆದಿವಾಸಿಗಳ ಅರಣ್ಯ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಭೂಮಿಯ ಹಕ್ಕುಗಳನ್ನು ಖಾತ್ರಿಪಡಿಸಬೇಕು. ಅರಣ್ಯ ಪ್ರದೇಶದಿಂದ ಆದಿವಾಸಿಗಳನ್ನು ಹೊರಹಾಕುವುದನ್ನು ನಿಲ್ಲಿಸಬೇಕು ಎಂದು ಸಿ.ಡಿ.ಆರ್.ಒ ಒತ್ತಾಯಿಸಿದೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ಪುರಾವೆಗಳ ನಾಶ ಮಾಡಿರುವ ಸಾಧ್ಯತೆ ಇದೆ. ಇದೊಂದು ಯೋಜಿತ ಕೃತ್ಯ ಎಂಬ ಅನುಮಾನ ಮೂಡಿದೆ ಎಂದು ಸಿಡಿಆರ್ಒ ತಂಡ ತಿಳಿಸಿದೆ.
ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಾಂಗ ಆಯೋಗವನ್ನು ರಚಿಸಬೇಕು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ನಕ್ಸಲ್ ನಿಗ್ರಹ ಪಡೆಯ (ಎಎನ್ಎಫ್) ವಿರುದ್ಧ ಎಫ್ಐಆರ್ ದಾಖಲಿಸಬೇಕು. ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಎಎನ್ಎಫ್ ಸಿಬ್ಬಂದಿಯನ್ನು ಅಮಾನತು ಮಾಡಿ, ಬಂಧಿಸಬೇಕು ಎಂದು ಸತ್ಯಶೋಧನಾ ಸಮಿತಿಯು ಒತ್ತಾಯಿಸಿದೆ.
ಆದಿವಾಸಿಗಳು ವಾಸಿಸುವ ಪ್ರದೇಶದಿಂದ ಎಎನ್ಎಲ್ ಅನ್ನು ವಾಪಸ್ ಪಡೆಯಬೇಕು, ಎನ್ಕೌಂಟರ್ಗಳನ್ನು ನಿಲ್ಲಿಸಬೇಕು, ಎನ್ಕೌಂಟರ್ ನಡೆಸಿರುವವರಿಗೆ ನಡೆಸುವ ಸಿಬ್ಬಂದಿಗೆಬಹುಮಾನಗಳನ್ನು ನೀಡಬಾರದು ಎಂದೂ ಬೇಡಿಕೆ ಮುಂದಿರಿಸಿದೆ.