ಮೈಸೂರು:ರೈಲ್ವೆ ಸಚಿವಾಲಯದ ನಿರ್ದೇಶನದಂತೆ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಚೆನ್ನೈ-ಮೈಸೂರು – ಚೆನ್ನೈ ವಂದೇ ಭಾರತ್ ರೈಲಿಗೆ ’14 ನಿಮಿಷಗಳ ಪವಾಡ’ – ಶುಚಿಗೊಳಿಸುವ ಹೊಸ ಪ್ರಕ್ರಿಯೆಯನ್ನು ಪರಿಚಯಿಸುತ್ತಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು “14 ನಿಮಿಷಗಳ ಪವಾಡ” ಎಂದು ಕರೆಯಲ್ಪಡುವ ಒಂದು ಅದ್ಭುತ ಉಪಕ್ರಮವನ್ನು ಹೆಮ್ಮೆಯಿಂದ ಅನಾವರಣಗೊಳಿಸುತ್ತಿದೆ. ಚೆನ್ನೈ-ಮೈಸೂರು-ಚೆನ್ನೈನ 16 ಕೋಚುಗಳ ‘ವಂದೇ ಭಾರತ್’ ರೈಲಿನ ಸ್ವಚ್ಛತೆಗೆ ಈ ವಿನೂತನ ಶುಚಿಗೊಳಿಸಲು ನಡೆಸಲಾಗುವ ಪ್ರಕ್ರಿಯೆಯು ರೈಲಿನ ಸ್ವಚ್ಛತೆ ಮತ್ತು ದಕ್ಷತೆಯಲ್ಲಿಒಂದು ನವೀನ ಮಾದರಿ ಬದಲಾವಣೆಯ ಭರವಸೆ ನೀಡುತ್ತದೆ.
“14 ನಿಮಿಷಗಳ ಪವಾಡ” ಕಾರ್ಯಕ್ರಮವನ್ನು ವಂದೇ ಭಾರತ್ ರೈಲುಗಳು ವಿವಿಧ ಗಮ್ಯ ಸ್ಥಾನಗಳಿಗೆ ಆಗಮಿಸಿದ ನಂತರ ಅವುಗಳನ್ನು ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿರುವ ಈ ವಿಧಾನದಿಂದ ಕೇವಲ 14 ನಿಮಿಷಗಳಲ್ಲಿ ಸಂಪೂರ್ಣವಾಗಿ ಸಮಗ್ರವಾಗಿ ಶುಚಿಗೊಳಿಸುವಿಕೆಯನ್ನು ಸಾಧಿಸಲಾಗುತ್ತದೆ. ಇದು ರೈಲಿನ ಹಿಂತಿರುಗುವಿಕೆಯ ಸಮಯವನ್ನು ಗಣನೀಯವಾಗಿ ಇಳಿಸುತ್ತದೆ ಮತ್ತು ಪ್ರಯಾಣಿಕರ ಆಹ್ಲಾದಕರ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಸ್ವಚ್ಛಗೊಳಿಸುವ ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳು:
- ಒಟ್ಟು ಸ್ವಚ್ಛಗೊಳಿಸುವ ಸಿಬ್ಬಂದಿ ನಿಯೋಜನೆ: 48 ಸಿಬ್ಬಂದಿ ಮತ್ತು 3 ಮೇಲ್ವಿಚಾರಕರು.
- ಪ್ರತಿಯೊಂದು ಬೋಗಿಗೂ ತರಬೇತಿ ಪಡೆದ 3 ಸಿಬ್ಬಂದಿ ಸದಸ್ಯರನ್ನು ನಿಯೋಜಿಸಲಾಗುತ್ತದೆ
- ಮೊದಲನೆ ಸಿಬ್ಬಂದಿ ಕಸವನ್ನು ಸಂಗ್ರಹಿಸುತ್ತಾರೆ, ಒಣ ಒರಸುವಿಕೆಯನ್ನು ನಿರ್ವಹಿಸುತ್ತಾರೆ ಮತ್ತು ಹೊರಗಿನ ಕಿಟಕಿ ಗಾಜನ್ನು ಸ್ವಚ್ಛಗೊಳಿಸುತ್ತಾರೆ.
- ಎರಡನೆಯ ಸಿಬ್ಬಂದಿ ಉಪಹಾರ ಮೇಜು ಮತ್ತು ಆಸನಗಳನ್ನು ಶುಚಿಗೊಳಿಸುತ್ತಾರೆ ಮತ್ತು ನೀರಿನಿಂದ ಒರೆಸುತ್ತಾರೆ.
- ಮೂರನೆಯ ಸಿಬ್ಬಂದಿ ಕಸದಬುಟ್ಟಿಗಳನ್ನು ಶೌಚಾಲಯಗಳನ್ನು ಕನ್ನಡಿಗಳನ್ನು ದ್ವಾರದ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಈ ಪ್ರದೇಶಗಳನ್ನು ಸೂಕ್ಷ್ಮವಾಗಿ ಒರೆಸುತ್ತಾರೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಈ ಕೆಲಸದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳ ಅಚಲವಾದ ಸಮರ್ಪಣೆಗೆ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “14 ನಿಮಿಷಗಳ ಪವಾಡ” ಕಾರ್ಯಕ್ರಮವು ವಂದೇ ಭಾರತ್ ರೈಲುಗಳಲ್ಲಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಿಖರವಾಗಿ ಹೊಂದಿಸುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಈ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿದ್ದೂ ನಿಖರವಾದ ಸಮಯದ ಚೌಕಟ್ಟಿನೊಳಗೆ ರೈಲು ಹಿಂದಿರುಗಿ ಹೊರಡಲು ಸಿದ್ಧಮಾಡುತ್ತದೆ.
ಈ ಮೊದಲು, ಚೆನ್ನೈ-ಮೈಸೂರು-ಚೆನ್ನೈ ವಂದೇ ಭಾರತ್ ರೈಲಿನ 16 ಕೋಚ್ಗಳನ್ನು ಸ್ವಚ್ಛಗೊಳಿಸಲು ಸುಮಾರು 30-45 ನಿಮಿಷಗಳು ಬೇಕಾಗುತ್ತಿತ್ತು. “14 ನಿಮಿಷಗಳ ಪವಾಡ” ದ ಪರಿಚಯದೊಂದಿಗೆ, ಸ್ವಚ್ಛಗೊಳಿಸುವ ಪ್ರಕ್ರಿಯೆಯು ಈಗ ಸುಸಂಘಟಿತ ಪ್ರಯತ್ನವಾಗಿದೆ. ಪ್ರತಿ ಕೋಚ್ಗೆ 3 ಶುಚಿಗೊಳಿಸುವ ಸಿಬ್ಬಂದಿಗಳು ಇದ್ದು, ಕೇವಲ 14 ನಿಮಿಷಗಳಲ್ಲಿ ರೈಲು ನಿರ್ಗಮಿಸಲು ಅನಕೂಲವಾಗುವಂತೆ ಕೆಲಸ ಮಾಡುತ್ತಾರೆ.
ಈ ಉಪಕ್ರಮವು ಜಾಗತಿಕ ಮಟ್ಟದಲ್ಲಿಉತ್ತಮ ಗುಣಮಟ್ಟವನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ದೃಢವಾದ ಹೆಜ್ಜೆಯಾಗಿದೆ ಮತ್ತು ಅಂತಾರಾಷ್ಟ್ರೀಯವಾಗಿ ಅನುಸರಿಸುವ ಅಸಾಧಾರಣ ಅಭ್ಯಾಸಗಳಿಂದ ಪ್ರೇರಿತವಾಗಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಪ್ರಯಾಣದ ತೃಪ್ತಿಯನ್ನು ಹೆಚ್ಚಿಸುವ ಮತ್ತು ರೈಲು ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆನಂದದಾಯಕವಾಗಿಸುವ ತನ್ನ ಬದ್ಧತೆಯಲ್ಲಿ ಅಚಲವಾಗಿದೆ.
ಇಂದು ಮುಂಜಾನೆ, ಮೈಸೂರು ರೈಲು ನಿಲ್ದಾಣದಲ್ಲಿ “ಏಕ್ ತಾರೀಖ್ ಏಕ್ ಘಂಟಾ ಏಕ್ ಸಾಥ್” ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು, ಇತರ ಹಿರಿಯ ಅಧಿಕಾರಿಗಳು, ವಿಭಾಗದ ಸಿಬ್ಬಂದಿ ಮತ್ತು ‘ಬ್ರಹ್ಮಕುಮಾರಿ’ ಮತ್ತು ಇತರ ಸಂಸ್ಥೆಗಳ ಸ್ವಯಂಸೇವಕರುಗಳ ಜೊತೆ ಈ ಶ್ರಮದಾನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ಕಾರ್ಯಕ್ರಮವು ಮೈಸೂರು ವಿಭಾಗದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 02 ರವರೆಗೆ ಆಯೋಜಿಸಲಾಗಿರುವ ಹದಿನೈದು ದಿನಗಳ ವಿಶೇಷ ಸ್ವಚ್ಛತಾ ಅಭಿಯಾನದ ಭಾಗವಾಗಿತ್ತು. ರೈಲ್ವೆ ನಿಲ್ದಾಣಗಳು, ರೈಲುಗಳು, ಕಛೇರಿಗಳು, ಕಾಲೋನಿಗಳು, ಡಿಪೋಗಳು, ಆಸ್ಪತ್ರೆಗಳು, ಇತ್ಯಾದಿ ಸೇರಿದಂತೆ ಎಲ್ಲಾ ಆವರಣಗಳಲ್ಲಿ ಸ್ವಚ್ಛತೆಯಲ್ಲಿ ಗಮನೀಯವಾದ ಮತ್ತು ಸ್ಪಷ್ಟವಾದ ಸುಧಾರಣೆಗಳನ್ನು ತರುವ ಉದ್ದೇಶದಿಂದ ಸ್ವಚ್ಛತಾ ಪಾಕ್ಷಿಕವನ್ನು ಆಯೋಜಿಸಲಾಗಿದೆ.
ಹದಿನೈದು ದಿನಗಳ ಅಭಿಯಾನದ ಉದ್ದಕ್ಕೂ ಹಳಿಗಳು, ನಿಲ್ದಾಣದ ಆವರಣಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಮತ್ತು ಇದರಲ್ಲಿ ವಿವಿಧ ಇಲಾಖೆಗಳಾದ್ಯಂತ ಗರಿಷ್ಟ ಪ್ರದೇಶಗಳನ್ನು ಶುಚಿಗೊಳಿಸುವ ಯೋಜನೆಯನ್ನು ವ್ಯವಸ್ಥಿತ ವಾಗಿ ಮತ್ತು ವಿವರವಾಗಿ ತಯಾರಿಸಲು ವಿಶೇಷ ಗಮನ ನೀಡಲಾಗುವುದು.
