ಬೀದರ್: ಯಾರೇ ಹೇಳಿದರೂ ವಿಜಯೇಂದ್ರರನ್ನು ಕೆಳಗಿಳಿಸಲು ಆಗಲ್ಲ, ಒಂದು ಬಾರಿ ಅಧ್ಯಕ್ಷರಾದರೆ ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಬಿವೈ ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಈಗ ಎರಡು ಬಣಗಳು ಇರಬಹುದು. ಆದರೆ ಎಲ್ಲಾ ಭಿನ್ನಮತವನ್ನು ಹೈಕಮಾಂಡ್ ಸರಿಪಡಿಸುತ್ತದೆ. ಯತ್ನಾಳ್ ಮೇಲೆ ಯಾವುದೇ ಶಿಸ್ತು ಕ್ರಮವಾಗಲ್ಲ. ಯಾಕೆಂದರೆ ಅವರು ವೈಯಕ್ತಿಕ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಯತ್ನಾಳ್ ಉಚ್ಚಾಟನೆ ಪ್ರಶ್ನೆ ಇಲ್ಲ ಎಂದರು.
ದೆಹಲಿಗೆ ತೆರಳಿದ ಆರ್.ಅಶೋಕ್ ವಿಚಾರವಾಗಿ ಮಾತನಾಡಿ, ಅಶೋಕ್ ಸೇರಿದಂತೆ ಎಲ್ಲರನ್ನು ಕರೆದು ಭಿನ್ನಮತದ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆಯುತ್ತಿದೆ. ಎರಡು ಬಣಗಳಾಗಿದ್ದರೂ ನಮ್ಮ ಹೋರಾಟ ಒಂದಾಗಿದೆ. ಶಿಸ್ತು ಸಮಿತಿ ಮುಂದೆ ಯತ್ನಾಳ್ ಎಲ್ಲಾ ಸ್ಪಷ್ಟನೆ ನೀಡುತ್ತಾರೆ. ಮುಂದೆ ಎಲ್ಲಾ ಬಣಗಳು ಒಂದಾಗುತ್ತವೆ ಎಂದರು.