ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಣ್ಣು ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಯಾರು ಕೂಡ ನಿರ್ಲಕ್ಷ ಮಾಡಬಾರದು ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ
ಡಾ.ಅಶೋಕ್ ಹೇಳಿದರು.
ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವೈದ್ಯಾಧಿಕಾರಿಗಳು, ನೇತ್ರಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಮತ್ತು ಓದುವಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷಿಸಿ. ಇದು ಕಣ್ಣಿನ ಸಂಬಂಧಿತ ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ಮತ್ತು ಸರಿಯಾದ ಚಿಕಿತ್ಸೆ ನೀಡಿ ಅದನ್ನು ತಡೆಯಲು ಉತ್ತಮ ಮಾರ್ಗವಾಗಿದೆ ಎಂದರು.
ಕಣ್ಣಿನ ಬಗ್ಗೆ ಸರ್ವರು ಸದಾ ಎಚ್ಚರದಿಂದಿರಬೇಕು. ರೈತರು ತಮ್ಮ ಹೊಲಗದ್ದೆಗಳಲ್ಲಿ ದಿನನಿತ್ಯ ಕೆಲಸ ಮಾಡುವ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಹಲವು ಅವಘಡಗಳು ನಡೆಯುವ ಸಾಧ್ಯತೆ ಇರುತ್ತದೆ ಹಾಗೂ ಮಕ್ಕಳು ಆಟವಾಡುವ ಸಮಯದಲ್ಲಿ ಅವರಿಗೆ ಅರಿವಿಲ್ಲದೆ ನಡೆಯುವ ಘಟನೆಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದರು.
ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣನ್ನು ನೇತ್ರ ತಜ್ಞರಲ್ಲಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ನಡೆಯುವ ಇಂತಹ ಉಚಿತ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕಣ್ಣಿನ ತಪಾಸಣೆಯನ್ನು ನಡೆಸಿ ಶಸ್ತ್ರ ಚಿಕಿತ್ಸೆ ಅಗತ್ಯ ಇರುವವರನ್ನು ಮೈಸೂರಿನ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಂಚಾರಿ ನಿಯಂತ್ರಣ ಘಟಕಕ್ಕೆ ಕರೆದೊಯ್ಯಲಾಯಿತು.
ಶಿಬಿರದಲ್ಲಿ ಡಾ.ಚೇತನ್ ಕುಮಾರ್ ಅವರ ನೇತೃತ್ವ ತಂಡದ ಡಾ.ಸೌಂದರ್ಯ, ಡಾ.ರೆಹಾನ್, ನೇತ್ರಾಧಿಕಾರಿಗಳಾದ ಎ.ಎಸ್.ಮಂಜುನಾಥ, ಕೆ.ಎಸ್.ಶೇಖರ್, ಶಿಬಿರದ ಸಂಘಟಕ ಕೆ.ಟಿ.ಮೋಹನ್ ಕುಮಾರ್, ಪ್ರಯೋಗ ಶಾಲಾ ತಂತ್ರಜ್ಞರಾದ ಆರ್.ಶಿವಕುಮಾರ್, ಶ್ರೀಮಂತ್ , ಎನ್ ಸಿ ಡಿ ವಿಭಾಗದ ಆಪ್ತ ಸಮಾಲೋಚಕ ಲಕ್ಷ್ಮಣ, ಆಸ್ಪತ್ರೆಯ ಸಿಬ್ಬಂದಿಗಳಾದ ಶಶಿಯಮ್ಮ, ಸಿದ್ದು, ಅಶ್ವಿನಿ, ರೂಪ, ಮಧು, ರಾಮಲಿಂಗಪ್ಪ, ಕಾಂತರಾಜು, ಅರವಿಂದ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.