ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಜಾತಿ ಗಣತಿಯನ್ನು ವಿರೋಧಿಸುವುದಿಲ್ಲ. ಆದರೆ ಜನಗಣತಿಯನ್ನು ಸಮಾಜದ ಪ್ರಗತಿಗೆ ಬಳಸಬೇಕು. ಇದರಲ್ಲಿ ರಾಜಕೀಯ ಬೇಡ ಎಂದು ಗುರುವಾರ ಸಂಘಟನೆ ಸ್ಪಷ್ಟಪಡಿಸಿದೆ.
ಆರ್ ಎಸ್ ಎಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಧರ್ ಗಾಡ್ಗೆ ಅವರು ಡಿಸೆಂಬರ್ 19 ರಂದು ಜನಗಣತಿಯನ್ನು ವಿರೋಧ ವ್ಯಕ್ತಪಡಿಸಿದ್ದರು. ಜಾತಿ ಗಣತಿಯು ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಒದಗಿಸುವುದರಿಂದ ಕೆಲವು ಜನರಿಗೆ ರಾಜಕೀಯವಾಗಿ ಲಾಭವಾಗಬಹುದು, ಆದರೆ ಇದು ಸಾಮಾಜಿಕವಾಗಿ ಮತ್ತು ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ ಎಂದು ಹೇಳಿದ್ದರು.
ಇದೀಗ, ಆರ್ ಎಸ್ ಎಸ್ ನ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಜಾತಿ ಗಣತಿಯನ್ನು ನಡೆಸುವಾಗ, ಅದು ಬಿರುಕು ಸೃಷ್ಟಿಸದಂತೆ ನೋಡಿಕೊಳ್ಳಬೇಕು ಎಂದು ಸಂಘಟನೆ ಹೇಳಿದೆ.
ಯಾವುದೇ ತಾರತಮ್ಯವಿಲ್ಲದೆ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಿಂದೂ ಸಮಾಜವನ್ನು ನಿರ್ಮಿಸಲು ಸಂಘಟನೆಯು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಆರ್ ಎಸ್ಎಸ್ ಹೇಳಿದೆ.