ಮಂಡ್ಯ: ರೈತರಿಗೆ ಬರ ಬಂದರೆ ಏನಾಗುತ್ತೆ ಅಂತ ಗೊತ್ತಿದೆ. ರೈತರು ಹೇಗೆ ಸಾಲಗಾರರಾಗುತ್ತಾರೆ ಎಂಬುದು ಗೊತ್ತಿದೆ. ರೈತರ ಹಿತ ಕಾಪಾಡಲು ಹಿಂದೆ ಬೀಳಲ್ಲ. ಅಧಿಕಾರಕ್ಕೋಸ್ಕರ ರೈತರನ್ನ ಬಲಿಕೊಡಲ್ಲ. ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ನಾನು ಇಂದು ಮಂಡ್ಯದ ಎರಡು ಕಾರ್ಯಕ್ರಮಕ್ಕೆ ಬಂದಿದ್ದೇನೆ. ರೈತರನ್ನು ಭೇಟಿಯಾಗಿ ಅವರ ಅಭಿಪ್ರಾಯ ಕೇಳಬೇಕು ಹಾಗೂ ಒತ್ತಾಯ ಪತ್ರ ತೆಗೆದುಕೊಳ್ಳಬೇಕು ಎಂದು ಸಚಿವ ಚಲುವರಾಯ ಸ್ವಾಮಿಯವರು ಹೇಳಿದ್ದರು. ಆ ಕಾರಣದಿಂದ ಬಂದಿದ್ದೇನೆ. ಹೊಸ ರಸ್ತೆಯಾದ್ದರಿಂದ ಮಂಡ್ಯದ ಒಳಗೆ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ಈ ವರ್ಷ ನಾವು ಭೀಕರ ಬರಗಾಲ ಅನುಭವಿಸುತ್ತಿದ್ದೇವೆ. ಆಗಸ್ಟ್ ತಿಂಗಳಲ್ಲಿ ಮಳೆ ಬರಲಿಲ್ಲ. ಸೆಪ್ಟೆಂಬರ್ ನಲ್ಲಿ ಸ್ವಲ್ಪ ಮಳೆಯಾಯಿತು ಅಷ್ಟೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗಲಿಲ್ಲ. ದೇಶದ ಅನೇಕ ಕಡೆ ಮಳೆಯಾಗಲಿಲ್ಲ. ಕೇರಳದ ವೈನಾಡಿನಲ್ಲಿ ಮಳೆಯಾಗದಿದ್ದ ಕಾರಣ ಕಬಿನಿ ಜಲಾಶಯಕ್ಕು ನೀರು ಬರಲಿಲ್ಲ. ಕಬಿನಿ, ಕೆ.ಆರ್.ಎಸ್ , ಹಾರಂಗಿ, ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಲೆ ಇಲ್ಲ. ಈ ಬಾರಿ 112 ಅಡಿ ಮಾತ್ರ. ಕೆ.ಆರ್.ಎಸ್ ತುಂಬಲಿಲ್ಲ. ಹೇಮಾವತಿ,ಕೆ.ಆರ್.ಎಸ್, ಕಬಿನಿ ಜಲಾಶಯ ತುಂಬಲಿಲ್ಲ.ಇದು ಸಂಕಷ್ಟದ ವರ್ಷವಾಗಿದೆ ಎಂದರು.
ಸಾಮಾನ್ಯವಾಗಿ 177.25 ಟಿಎಂಸಿ ಕೊಡಬೇಕಿದೆ.ಇದರಲ್ಲಿ ಪ್ರತಿ ತಿಂಗಳು ಕೊಡಬೇಕು ಎಂದು ಆದೇಶ ಮಾಡಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಈ ಕಾವೇರಿ ಸಮಸ್ಯೆ ಇದೆ. ಈ ವ್ಯಾಜ್ಯಕ್ಕೆ ನೂರು ವರ್ಷ ಇತಿಹಾಸ ಇದೆ. ಹಳೆ ಅಗ್ರಿಮೆಂಟ್ ಹಿಡಿದುಕೊಂಡು ಅಲ್ಲಾಡಿಸುತ್ತಿದ್ದಾರೆ. ನೀರು ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆಯೂ ನಾವು ವಾದ ಮಾಡಿದ್ದೇವೆ. ನಮ್ಮ ರೈತರ ಬಲಿ ಕೊಟ್ಟು ಬೇರೆ ರೈತರ ಹಿತ ಕಾಪಾಡಲು ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಿನ್ನೆಯು 2600 ಕ್ಯೂಸೆಕ್ ಬಿಡಿ ಅಂತ ಆದೇಶ ಮಾಡಿದ್ದಾರೆ. ಇದು ಸೂಕ್ಷ್ಮ ವಿಚಾರವಾದ್ದರಿಂದ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ನೀರನ್ನು ಎಷ್ಟು ಬಿಟ್ಟರೆ ಏನಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ವರ್ಷಕ್ಕೆ ಕುಡಿಯಲು 35 ಟಿಎಂ ಸಿ ನೀರು ಬೇಕಿದೆ. ಮಳೆ ಬಾರದಿದ್ದರೆ ಇನ್ನೊಂದು ಬೆಳೆ ಮಾಡಲು ಸಾಧ್ಯವಿಲ್ಲ. ಮಳೆ ಬರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳೊಣ ಎಂದರು.
ಈಗಿರುವ ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಿದೆ. ಕುಡಿಯುವ ನೀರು ಕೊಡಬೇಕಿದೆ. ಉಳಿದ ನೀರನ್ನು ತಮಿಳುನಾಡಿಗು ಕೊಡಬೇಕು, ನಮ್ಮ ಬೆಳೆಗು ಕೊಡಬೇಕಿದೆ. ನಮ್ಮ ಅರ್ಜಿಯನ್ನ ಪ್ರಾಧಿಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ಕೂಡ ಅದೇ ಹೇಳಿದೆ. ಈಗಿರುವ ಮುಂಗಾರು ಬೆಳೆಯನ್ನ ಹೇಗಾದ್ರು ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ನಾನು ರೈತನ ಮಗ ರೈತರ ಕಷ್ಟ ಗೊತ್ತಿದೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಕಾವೇರಿ ಬಗ್ಗೆ ಚರ್ಚೆ
ಬೆಳಗಾವಿಯಲ್ಲಿ ಅಧಿವೇಶನ ಕರೆಯುತ್ತಿದ್ದೇವೆ. ಅಲ್ಲಿ ಕಾವೇರಿ ಬಗ್ಗೆ ಚರ್ಚೆ ಮಾಡ್ತೇವೆ. ಗಂಭೀರವಾಗಿ ಚರ್ಚಿಸಿ ರೈತ ಹಿತ ಕಾಪಾಡುವ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಬಂದ್ಮೇಲೆ ಮೈಷುಗರ್ ಕಾರ್ಖಾನೆಗೆ 10 ಕೋಟಿ ಕೇಳಿದ್ರು. ನಾನೂ ಹತ್ತು ಕೋಟಿ ಯಾಕೆ 50 ಕೋಟಿ ಕೊಡ್ತೀನಿ ಎಂದು ಕೊಟ್ಟೆ. ಶುಗರ್ ಫ್ಯಾಕ್ಟರಿಯರು ಸಕ್ಕರೆ ಮಾರಲು ಆಗುತ್ತಿಲ್ಲ. ಆದ್ರು ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿದೆ. ನಾವೂ ನಿಮ್ಮ ಪರವಾಗಿ ಇದ್ದೇವೆ, ಅದರಲ್ಲಿ ಸಂಶಯ ಬೇಡ ಎಂದು ಹೇಳಿದರು.
ಸಿಎಂ ಭಾಷಣದ ಬಳಿಕ ತಮಿಳುನಾಡಿಗೆ ನೀರು ಬಿಡದಂತೆ ನೀರು ಬಿಡಬಾರದೆಂದು ರೈತ ನಾಯಕಿ ಸುನಂದಾ ಜಯರಾಂ ಸಿಎಂಗೆ ಒತ್ತಾಯ ಮಾಡಿದರು.
ಈ ಮೂಲಕ ನಾವೂ ಮುಂದೆ ನೀರು ಬಿಡಲ್ಲ ಎಂದು ಪ್ರತಿಭಟನಾಕಾರರಿಗೆ ಸಿದ್ದರಾಮಯ್ಯ ತಿಳಿಸಿದರು.