ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜಯಂತಿ ಆಚರಣೆಯನ್ನು ಇದೇ ನ. ೨೮ರಂದು ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಹಾಗೂ ಸಂವಿಧಾನ ದಿನವನ್ನು ನ. ೨೬ರಂದು ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕಾರ್ಯಕ್ರಮ ಆಯೋಜನೆ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಸಂವಿಧಾನ ದಿನ ಆಚರಣೆ ಕಾರ್ಯಕ್ರಮವನ್ನು ಸಕಲ ಸಿದ್ದತೆಗಳೊಂದಿಗೆ ಆಚರಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆ, ಸಮುದಾಯಗಳ ಮುಖಂಡರು ವಿಧಾನಸಭಾ ಚುನಾವಣೆ ನೀತಿ ಸಂಹಿತೆಯಿಂದ ಜಿಲ್ಲಾಡಳಿತದಿಂದ ಸರಳವಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗಿತ್ತು. ನೀತಿ ಸಂಹಿತೆ ಬಳಿಕ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ತಿಳಿಸಲಾಗಿತ್ತು. ಅದರಂತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಹಿಂದಿನಂತೆಯೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೂ ಮೊದಲು ಏರ್ಪಡಿಸಲಾಗುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣವನ್ನು ನವೆಂಬರ್ ೨೬ರಂದು ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಂದು ಆಯೋಜನೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ನವೆಂಬರ್ ೨೬ರಂದು ಸಂವಿಧಾನ ದಿನ ಆಚರಣೆ ಹಾಗೂ ನವೆಂಬರ್ ೨೮ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗುತ್ತದೆ. ನವೆಂಬರ್ ೨೬ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ವಿಚಾರ ಸಂಕಿರಣ ಆಯೋಜನೆ ಮಾಡಲಾಗುತ್ತದೆ. ವಿಷಯ ತಜ್ಞರನ್ನು, ವಿಚಾರವಾದಿಗಳನ್ನು ಅಂಬೇಡ್ಕರ್ ಅವರ ವಿಚಾರ ಮಂಡನೆಗೆ ಆಹ್ವಾನಿಸಲಾಗುವುದು. ಅಂಬೇಡ್ಕರ್ ಜಯಂತಿಯಂದು ಸಹ ಮುಖ್ಯ ಭಾಷಣಕಾರರನ್ನು ಸಹ ಆಹ್ವಾನಿಸಲಾಗುವುದು. ಈ ನಿಟ್ಟಿನಲ್ಲಿ ಮುಖಂಡರು ನೀಡುವ ಸಲಹೆಯನ್ನು ಪರಿಗಣಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಡಿವೈಎಸ್ಪಿ ಲಕ್ಷ್ಮಯ್ಯ, ತಹಶೀಲ್ದಾರ್ ಬಸವರಾಜು, ಸಮಾಜ ಕಲ್ಯಾಣ ಇಲಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್, ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಸಿ.ಕೆ. ರವಿಕುಮಾರ್, ಸಿ.ಕೆ. ಮಂಜುನಾಥ್, ಅರಕಲವಾಡಿ ನಾಗೇಂದ್ರ, ಸೋಮಶೇಖರ ಬಿಸಲವಾಡಿ, ನಾಗರಾಜು, ರಾಮಸಮುದ್ರ ಸುರೇಶ್, ಬಸವನಪುರ ರಾಜಶೇಖರ್, ಎಸ್. ಶ್ರೀಕಂಠಮೂರ್ತಿ ರಾಮಸಮುದ್ರ, ಪಿ. ಸಂಘಸೇನಾ, ಬಸವರಾಜು, ಪರಶಿವಮೂರ್ತಿ, ಸಿ.ಎಂ. ನರಸಿಂಹಮೂರ್ತಿ, ಉಮ್ಮತ್ತೂರು ಸೋಮಣ್ಣ, ಅನಿಲ್ ಕುಮಾರ್, ಜಿ.ಬಂಗಾರು, ಸಿ.ಎಂ.ಶಿವಣ್ಣ, ಆರ್.ಶಿವಣ್ಣ, ಬ್ಯಾಡಮೂಡ್ಲು ಬಸವಣ್ಣ, ವಿ. ರವಿ ಸೋಮಳ್ಳಿ, ಸಿದ್ದನಾಯಕ, ಪ್ರಸನ್ನಕುಮಾರ್, ಎನ್.ರಂಗಸ್ವಾಮಿ, ಸಿ. ರಾಜಣ್ಣ, ದೊಡ್ಡಿಂದುವಾಡಿ ಸಿದ್ದರಾಜು, ಸಿ. ಚನ್ನಬಸವಯ್ಯ, ಗುರುಸ್ವಾಮಿ, ಶಿವಕುಮಾರ್, ಕಂದಹಳ್ಳಿ ನಾರಾಯಣ, ನಾ. ಕದಂಬ ಅಂಬರೀಶ್, ವಾಸು, ಪಣ್ಯದಹುಂಡಿ ರಾಜು, ನಾಗೇಶ್, ಹೊಂಗನೂರು ನಟರಾಜು, ನಾರಾಯಣ, ಸುಭಾಷ್, ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.