ಕೆ.ಆರ್.ನಗರ: ಒನಕೆ ಓಬವ್ವನವರಂತಹ ಧೀರ ಮಹಿಳೆ ಯನ್ನು ಆದರ್ಶವಾಗಿಟ್ಟುಕೊಂಡು ಇಂದಿನ ಮಹಿಳೆಯರು, ಯುವತಿಯರು ತಾವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಎದೆಗುಂದದೆ ಕೆಲಸ ಮಾಡುವ ಮೂಲಕ ಮಹಿಳೆಯರ ಶಕ್ತಿ ಏನೆಂಬುದನ್ನು ಸಮಾಜಕ್ಕೆ ತೋರಿಸಬೇಕೆಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ”ಒನಕೆ ಓಬವ್ವ ಒಬ್ಬ ಧೀರೆ, ದಿಟ್ಟ ಮಹಿಳೆಯಾಗಿದ್ದು, ತನ್ನ ರಾಜ್ಯ ದೇಶದ ಉಳಿವಿಗಾಗಿ ಪತಿಯ ಊಟಕ್ಕೆ ತೊಂದರೆ ನೀಡದೆ ಜೀವದ ಹಂಗು ತೊರೆದು ವೀರಾವೇಶದಿಂದ ಹೋರಾಟ ಮಾಡಿ ಶತ್ರು ಸೈನ್ಯದ ನೂರಾರು ಮಂದಿ ದ್ರೋಹಿಗಳನ್ನು ಸದೆಬಡಿದ ವೀರಮಹಿಳೆ, ಈ ಮೂಲಕ ಒಬ್ಬ ಉತ್ತಮ ಸತಿಯಾಗಿ ರಾಜ್ಯದ ಧೀರ ಮಹಿಳೆಯಾಗಿ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ತ್ಯಾಗಮಯಿ,” ಎಂದರು.
”ಇಂತಹ ಸ್ವಾತಂತ್ರ್ಯ ಹೋರಾಟಗಾ ರ್ತಿಯನ್ನು ಇಂದಿನ ಯುವತಿಯರು, ಮಹಿಳೆಯರು ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಉದ್ಯೋಗ ಮಾಡುತ್ತಿರುವ ಆಯಾ ತಾವು ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸುವಂತೆ,” ಕಿವಿಮಾತು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಮಾತನಾಡಿ ಪಾಳೇಗಾರರಿಗೆ ಒಂದು ಚರಿತ್ರೆ ಇದ್ದರೆ, ಅದರಲ್ಲಿ ವೀರವನಿತೆ ಒನಕೆ ಓಬವ್ವಳ ಪಾತ್ರ ಪ್ರಮುಖ. ಓಬವ್ವ ಐತಿಹಾಸಿಕ ಮಹಿಳೆಯಾಗಿ ಉಳಿಯಬೇಕಾದರೆ ಕೇವಲ ಒಂದು ಸಮುದಾಯದಿಂದ ಮಾತ್ರವಲ್ಲ ಎಲ್ಲ ಸಮುದಾಯಗಳ ಜವಾಬ್ದಾರಿ ಎಂದು ತಿಳಿಸಿದರು.
ಓಬವ್ವಳನ್ನು ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿಗೆ ಹೋಲಿಕೆ ಮಾಡಲಾಗುತ್ತೆ. ಓಬವ್ವಳಿಗೆ ಕೇವಲ ರಾಜಭಕ್ತಿ ಮಾತ್ರ ಇತ್ತು, ಚಿತ್ರದುರ್ಗ ಕೋಟೆಯನ್ನು ಶತ್ರುಗಳಿಂದ ರಕ್ಷ ಣೆ ಮಾಡಿದ ಒನಕೆ ಓಬವ್ವ ಈ ನಾಡು ಕಂಡ ಅಪರೂಪದ ಶಕ್ತಿ, ಧೈರ್ಯವಂತ ಮಹಿಳೆ ಎಂದು ಒನಕೆ ಒಬವ್ವ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು ನೆರದಿದ್ದ ಜನರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆ ರಾಮ ಚಂದ್ರು, ಸರ್ವೆ ಇಲಾಖೆ ಶ್ರೀಕಂಠ ಶರ್ಮ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಶಶಿಕುಮಾರ್, ಚುನಾವಣಾ ಶಾಖೆ ಶಿರಸ್ತೇದಾರ್ ಮೇಲೂರು ಶಿವಕುಮಾರ್, ಪ್ರಧಮ ದರ್ಜೆ ಸಹಾಯಕರಾದ ಸಣ್ಣಸ್ವಾಮಿ, ಧೃವಕುಮಾರ್ ಹಾಗೂ ಮಹಿಳಾ ಗ್ರಾಮಾಡಳಿತ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಹಾಜರಿದ್ದರು.