ಚಿಕ್ಕಬಳ್ಳಾಪುರ : ಜಾತಿ, ಮತ, ಭಾಷೆ, ಪ್ರಾದೇಶಿಕತೆ ಹೀಗೆ ಎಲ್ಲ ಎಲ್ಲೆಗಳನ್ನು ಮೀರಿ ಎಲ್ಲರನ್ನು ಒಂದಾಗಿಸುವ ಹಾಗೂ ಎಲ್ಲರನ್ನು ಒಟ್ಟಿಗೆ ಬೆಸೆಯುವ ಶಕ್ತಿ ಇರೋದು ಕ್ರೀಡೆಗೆ ಮಾತ್ರ, ಅಂತಹ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕಾರ್ಯಗಳು ಎಲ್ಲಾ ಜಿಲ್ಲೆಗಳಲ್ಲಿ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿ ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಪುಟ್ಬಾಲ್, ಖೋ-ಖೋ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡೆಗಳಿಗೆ ಕ್ರೀಡಾಂಗಣಗಳೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ಕ್ರೀಡೆಗಳನ್ನು ಆಡಲು ಅಗತ್ಯ ಮೂಲ ಸೌಕರ್ಯಗಳು ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಕೊರತೆಯಲ್ಲಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಯಾವೆಲ್ಲ ಉಪಕ್ರಮಗಳನ್ನು ಕೈಗೊಂಡರೆ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು ಎನ್ನುವ ಬಗ್ಗೆ ಕ್ರೀಡಾ ಅಭಿಮಾನಿಗಳು, ಕ್ರೀಡಾ ಪಟುಗಳು, ಕ್ರೀಡಾ ತರಬೇತುದಾರರು ತಿಳಿಸಬೇಕು ಹಾಗೂ ಇದೇ ರೀತಿ ಸರ್ಕಾರೇತರ ಸಂಸ್ಥೆಗಳಿಗೆ ಏನೆಲ್ಲಾ ಅಗತ್ಯತೆಗಳು ಬೇಕು, ಕ್ರೀಡಾಂಗಣಕ್ಕೆ ಎಷ್ಟು ಸ್ಥಳ ಬೇಕು ಮತ್ತು ತಮ್ಮ ಬೇಡಿಕೆಗಳು ಏನಿದೆ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಎರಡು ದಿನಗಳ ಒಳಗಾಗಿ ನೀಡುವಂತೆ ವಿವಿಧ ಕ್ರೀಡೆಗಳ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದರು.
ಮುಂದುವರೆದು, ಮನವಿಗಳನ್ನು ಸಮರ್ಪಕವಾಗಿ ನೀಡಿದಲ್ಲಿ ನೈಜ ಕ್ರೀಡೆಗಳಿಗೆ ಉತ್ತೇಜನ ನೀಡುವಂತಹ ಕೆಲಸವನ್ನು ಜಿಲ್ಲಾಡಳಿತ ಪ್ರಾಮಾಣಿಕವಾಗಿ ಮಾಡಲಿದೆ. ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು, ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಿಗೆ ಅನುದಾನವನ್ನು ಒದಗಿಸಲು ಅವಕಾಶಗಳಿವೆ. ಆದ್ದರಿಂದ ನಿಮ್ಮ ಅಗತ್ಯಗಳು ಏನಿವೆ, ಎಷ್ಟು ಅನುದಾನ ಬೇಕು. ಅನುದಾನದ ಕೊರತೆ ಆದಲ್ಲಿ ಸಿ.ಎಸ್.ಆರ್ ನಿಧಿಯಿಂದ ಅನುದಾನವನ್ನು ತರಲು ಪ್ರಯತ್ನ ಮಾಡಬಹುದು. ಆದ್ದರಿಂದ ಕ್ರೀಡಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ತಾವೆಲ್ಲರೂ ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ೧೦ ಕೋಟಿ, ಚಿಂತಾಮಣಿ ನಗರದ ಕ್ರೀಡಾಂಗಣ ಅಭಿವೃದ್ಧಿಗೆ 9.25 ಕೋಟಿ ಹಾಗೂ ೭ ಕೋಟಿಯಲ್ಲಿ ಚಿಂತಾಮಣಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ಯಾವ ಯಾವ ಕ್ರೀಡೆಗಳನ್ನು ಆಡಲು ಏನೆಲ್ಲಾ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಬೇಕು. ಆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಆದರೂ ಸಮರ್ಪಕವಾಗಿ ವಿನಿಯೋಗ ಆಗಬೇಕು. ಅನಗತ್ಯ ವಿಳಂಬ ಆದಲ್ಲಿ ಸಹಿಸುವ ಪ್ರಶ್ನೆಯೇ ಇಲ್ಲ ಅಂತಹ ಸ್ಥಿತಿಗೆ ಜಿಲ್ಲೆಯಲ್ಲಿ ಅವಕಾಶ ನೀಡಬಾರದು. ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮನವಿಗಳು, ಅಹವಾಲು ಗಳನ್ನು ಹಾಗೂ ಬೇಡಿಕೆಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕು. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಏನೆಲ್ಲ ಆಡಳಿತಾತ್ಮಕ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು ಅದೆಲ್ಲವನ್ನು ಮಾಡಲು ಕಡತಗಳನ್ನು ತ್ವರಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಡಿಸಲು ಕಟ್ಟುನಿಟ್ಟಿನ ಸೂಚನೆಯನ್ನು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಸಭೆಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಸಕ್ತರು, ಕ್ರೀಡಾ ಪಟುಗಳು ಇನ್ನೂ ಮುಂತಾದವರು ಭಾಗವಹಿಸಿದ್ದರು.



