ಹಾಸನ: ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ವಿದ್ಯಾರ್ಥಿ ಭೂಮಿಕ್ ಅವರ ಮನೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭೂಮಿಕ್ ತಂದೆ ಡಿ.ಟಿ. ಲಕ್ಷ್ಮಣ ಅವರೊಂದಿಗೆ ಮಾತನಾಡಿದ ಅಶೋಕ್, “ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಈ ಘಟನೆಗೆ ನ್ಯಾಯ ಸಿಗುವಂತೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಭೂಮಿಕ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆರ್ಥಿಕವಾಗಿ ಸುಸ್ಥಿತ ಕುಟುಂಬದಿಂದ ಬಂದವರಾಗಿದ್ದರು. ಆದರೆ ಒಬ್ಬನೇ ಮಗನನ್ನು ಕಳೆದುಕೊಂಡಿರುವ ಈ ದುಃಖವನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ” ಎಂದರು.
“ಆರ್ಸಿಬಿ ಸಂಭ್ರಮವನ್ನು ಎರಡು ದಿನ ಮುಂದೂಡಿದರೂ ಇಂತಹ ಅನಾಹುತವಾಗುತ್ತಿರಲಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ. ಕಾರ್ಯಕ್ರಮ ಮಾಡಬಾರದೆಂದು ಪೊಲೀಸರ ಸೂಚನೆ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಇದಕ್ಕೆ ಸೂಕ್ತ ತನಿಖೆ ಅಗತ್ಯ” ಎಂದು ಒತ್ತಾಯಿಸಿದರು.
ಭೂಮಿಕ್ ತಂದೆ ಲಕ್ಷ್ಮಣ, “ಇಷ್ಟು ಜನಸಂದಣಿ ಇರುವ ಜಾಗದಲ್ಲಿ ಕಾರ್ಯಕ್ರಮ ಮಾಡಬಾರದು ಎಂದು ಸರ್ಕಾರಕ್ಕೆ ಗೊತ್ತಾಗಲಿಲ್ಲವೇ? ನಮ್ಮ ಮಗನ ಪ್ರಾಣ ಹೋದ ನಂತರ ಹಣ ಕೊಟ್ಟರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.
ಆರ್.ಅಶೋಕ್ ಸೇರಿದಂತೆ ಎಲ್ಲ ಮುಖಂಡರು ನಮಗೆ ಸಹಾಯ ಮಾಡಿದ್ದಾರೆ. ಎಲ್ಲ ತಂದೆ ತಾಯಿಗಳಿಗೆ ಇವರು ಸ್ಪಂದಿಸಿದ್ದಾರೆ. ಘಟನೆ ನಡೆದ ಕೂಡಲೇ ಅಗತ್ಯವಾದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದು ರಾಜಕೀಯವಲ್ಲ. ಮಾನವೀಯತೆ ದೃಷ್ಟಿಯಿಂದ ಇವರು ಸಹಾಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.