ಚಾಮರಾಜನಗರ: ಗಡಿಭಾಗವಾದ ಚಾಮರಾಜನಗರ ಜಿಲ್ಲೆ, ಅಪ್ಪಟ ಕನ್ನಡಿಗರ ಪ್ರದೇಶವಾಗಿದೆ. ಕನ್ನಡಿಗರಲ್ಲಿ ಸ್ವಾಭಿಮಾನ, ಅಭಿಮಾನ ಭಾಷಾ ಪ್ರೇಮ, ಹಾಗೂ ಚಳುವಳಿ ಪ್ರಭಾವದಿಂದ ಭಾಷೆ ಉಳಿದಿದೆ ಎಂದು ಉಪನ್ಯಾಸಕರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಗಡಿ ಭಾಗವಾದ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ, ಅಮಚವಾಡಿ ,ಬಿಸಿಲವಾಡಿ ಅರಕಲವಾಡಿ ,ತಾಳವಾಡಿ ಪ್ರದೇಶಗಳು ಅಚ್ಚ ಕನ್ನಡಿಗರ ಪ್ರದೇಶವಾಗಿದೆ. ಮೂಲ ಕನ್ನಡ ಶಬ್ದಗಳ ಭಂಡಾರವೇ ಈ ಭಾಗದಲ್ಲಿ ಇದೆ. ಯಾವುದೇ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಮೂಲ ಕನ್ನಡ ಪದಗಳ ಬಳಕೆ ಇಲ್ಲಿನ ವೈಶಿಷ್ಟವಾಗಿದೆ .
ಕನ್ನಡ ಭಾಷೆ ತಾಯಿ ಭಾಷೆಯಾಗಿದ್ದು ,ಹೃದಯದ ಭಾಷೆಯಾಗಿದೆ. 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಸಾಹಿತ್ಯ ,ಸಂಸ್ಕೃತಿ ,ಜನಪದ, ಸಂಗೀತ, ನೃತ್ಯ, ಶಿಲ್ಪಕಲೆ, ಗಮಕ ಕಲೆಗಳನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕು .ನಾವು ಪ್ರತಿನಿತ್ಯ ಬಳಸುವ ಭಾಷೆ ಕನ್ನಡವಾಗಬೇಕು ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕ ಆರ್ ಮೂರ್ತಿ ಮಾತನಾಡಿ ಕನ್ನಡ ಕನ್ನಡಿಗ ಕರ್ನಾಟಕ ಭಾವನೆ ನಮ್ಮದಾಗಬೇಕು. ಭಾಷೆಯನ್ನು ಪ್ರೀತಿಸಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪ ಮಾತನಾಡುತ್ತ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡದ ಏಕೀಕರಣಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು, ಕನ್ನಡ ಪ್ರದೇಶಗಳು ಹರಿದು ಹಂಚಿ ಹೋಗಿದ್ದಾಗ ಕನ್ನಡಿಗರನ್ನು ಒಂದುಗೂಡಿಸಿದ ಏಕೀಕರಣ ಚಳುವಳಿ ಇತಿಹಾಸ ಅಪಾರವಾಗಿದೆ ಎಂದರು. ಉಪನ್ಯಾಸಕರಾದ ಶಿವಸ್ವಾಮಿ, ಬಸವಣ್ಣ ,ರಮೇಶ್, ಶಿವರಾಮ್, ಸುರೇಶ್ ಉಪಸ್ಥಿತರಿದ್ದರು.