ಬೆಂಗಳೂರು : ಕೃಷಿ ರಾಜ್ಯ ಸರ್ಕಾರದ ಪ್ರಮುಖ ಆದ್ಯತಾ ಕ್ಷೇತ್ರವಾಗಿದ್ದು, ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಪೂರ್ವ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ವೇಳೆ ರೈತರ ಹಿತದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದೂ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕೃಷಿ ಸಚಿವ ಎನ್. ಚಾಲುವರಾಯಸ್ವಾಮಿ, ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ವೇಳೆ ರೈತ ಸಂಘಟನೆಗಳ ಒಕ್ಕೂಟವು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ಬ್ಯಾಂಕುಗಳು ರೈತರಿಗೆ ಭೂಮಿಯ ಮೌಲ್ಯದ ಶೇ.75ರಷ್ಟು ಕೃಷಿ ಸಾಲ ನೀಡಬೇಕು, ರೈತರ ಪುತ್ರರನ್ನು ವಿವಾಹವಾಗುವ ಹುಡುಗಿಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.20 ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ, ಕಬ್ಬಿನ ಬೆಲೆಯನ್ನು ರೈತರ ಹೊಲದಲ್ಲೇ ನಿಗದಿಪಡಿಸುವ ವ್ಯವಸ್ಥೆ, ಕೆರೆಗಳ ಹೂಳು ತೆಗೆಯಿಸಿ ಅದನ್ನು ರೈತರ ಹೊಲಗಳಿಗೆ ಸಾಗಿಸುವುದು, ರೈತರಿಗೆ ರೂ.10,000 ಆರ್ಥಿಕ ಸಹಾಯ, ಕಳಪೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಮಾರಾಟದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವುದು ಹಾಗೂ ಎಲ್ಲಾ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುವಂತೆ ಒಕ್ಕೂಟ ಮನವಿ ಮಾಡಿತು.



