ದಾವಣಗೆರೆ: ಪಾಕಿಸ್ತಾನ ಎದುರು ಇಂದಿರಾ ಗಾಂಧಿಯ ಶೈಲಿಯಲ್ಲಿಯೇ ಪ್ರಬಲ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗಲೂ ನಿರ್ಧಾರ ತೆಗೆದುಕೊಳ್ಳದಿರುವುದನ್ನು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕಾಲದಲ್ಲಿ ಪಾಕಿಸ್ತಾನವನ್ನು ಸರಿಯಾದ ರೀತಿಯಲ್ಲಿ ಎದುರಿಸಿದ್ದರು ಎಂಬುದನ್ನು ಖಂಡ್ರೆ ಸ್ಮರಿಸಿದರು. “ಇಂದಿರಾ ಗಾಂಧಿಯವರ ನಡವಳಿಕೆಯಂತೆ ಈಗಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಲಹೆ ನೀಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಈ ಕುರಿತು ಏಕೆ ಮೌನವಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ?” ಎಂದು ಪ್ರಶ್ನಿಸಿದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ಸಂಭವಿಸಿದ ದಾಳಿಗೆ ಭದ್ರತಾ ವೈಫಲ್ಯವೇ ಕಾರಣವಾಗಿದೆ ಎಂದು ಖಂಡ್ರೆ ಸ್ಪಷ್ಟಪಡಿಸಿದರು. “ಇಡೀ ದೇಶಕ್ಕೂ ಇದೊಂದು ಭದ್ರತಾ ದೌರ್ಬಲ್ಯದ ಉದಾಹರಣೆಯಾಗಿದೆ. ಇದಕ್ಕಿಂತ ಮೊದಲು ಕಂದಹಾರ ವಿಮಾನ ಅಪಹರಣ, ಸಂಸತ್ತಿನ ಮೇಲೆ ದಾಳಿ, ಅಕ್ಷರಧಾಮ ದಾಳಿಯಂತಹ ಪ್ರಮುಖ ಘಟನೆಗಳು ಕೂಡಾ ಬಿಜೆಪಿ ಆಡಳಿತದಲ್ಲಿ ನಡೆದಿವೆ. ಇಂತಹ ಪ್ರಕರಣಗಳ ನಡುವೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ನೈತಿಕ ಹಕ್ಕು ಬಿಜೆಪಿಗೆ ಉಳಿದಿಲ್ಲ,” ಎಂದರು.
ಕರಾವಳಿಯಲ್ಲಿ ನಡೆದ ಅಪರಾಧ ಕೃತ್ಯಗಳ ಬಗ್ಗೆ ಮಾತನಾಡಿದ ಅವರು, “ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು. “ಸಮಾಜಘಾತುಕ ಶಕ್ತಿಗಳಿಗೆ ಜಾತಿ ಅಥವಾ ಧರ್ಮವಿಲ್ಲ. ಕೊಲೆಗಡುಕರು ಅಥವಾ ಅಪರಾಧಿಗಳನ್ನು ಕಟ್ಟೆಚ್ಚರದಿಂದ ಎದುರಿಸುವ ಶಕ್ತಿ ರಾಜ್ಯ ಸರ್ಕಾರಕ್ಕಿದೆ. ಬಿಜೆಪಿ ಸುಧಾರಣೆಗಾಗಿ ಸಲಹೆ ನೀಡಬೇಕಾದರೆ ಒಪ್ಪಿಗೆಯಿದೆ. ಆದರೆ, ಸರ್ಕಾರವಿರುದ್ಧ ಆರೋಪ ಮಾಡುವುದು ಸರಿಯಲ್ಲ,” ಎಂದು ಟೀಕಿಸಿದರು.
ಜನಗಣತಿ ಜತೆಗೆ ಜಾತಿಗಣತಿ ಕುರಿತು ಮಾತನಾಡಿದ ಖಂಡ್ರೆ, “ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಯ ಮಾಹಿತಿ ಕೂಡಾ ಸಂಗ್ರಹಿಸಲಾಗಬೇಕು. ರಾಜ್ಯದ ಜಾತಿಗಣತಿಯಲ್ಲಿ ಕೆಲವು ಸಣ್ಣ ಸಮುದಾಯಗಳು ಕಣ್ಮರೆಗೊಂಡಿರುವ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ,” ಎಂದರು.
“ಮೇ 9ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸುತ್ತೇನೆ,” ಎಂದು ಖಂಡ್ರೆ ತಿಳಿಸಿದ್ದಾರೆ.