ಬೆಂಗಳೂರು: ನಗರದ ಬನಶಂಕರಿಯಲ್ಲಿ ಸಂಭವಿಸಿರುವ ಮನಕಲಕುವ ಘಟನೆಯಲ್ಲಿ, ವಯೋವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ದುರಂತ ಬೆಳಕಿಗೆ ಬಂದಿದೆ. ಮಗ ವೃದ್ಧಾಶ್ರಮದಲ್ಲಿ ಉಳಿಸಿದ್ದಕ್ಕೆ ಮನನೊಂದು ತಂದೆ–ತಾಯಿಯಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.
ಮೃತರಾದವರು ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಆಗಿದ್ದು, ಈ ಇಬ್ಬರೂ ಕಳೆದ ಒಂದು ತಿಂಗಳಿನಿಂದ ಬನಶಂಕರಿಯ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಆಶ್ರಮದ ಸಿಬ್ಬಂದಿಯ ಪ್ರಕಾರ, ದಂಪತಿಗಳಿಗೆ ಪ್ರತ್ಯೇಕ ಕೊಠಡಿ ನೀಡಲಾಗಿತ್ತು. ದಿನಚರಿಯಂತೆ ಆಹಾರ ಸೇವಿಸಿದ ನಂತರ ಅವರು ಟಿವಿ ನೋಡುತ್ತಿದ್ದರು. ಟಿವಿ ಸೀರಿಯಲ್ ನೋಡುವ ವಿಚಾರಕ್ಕೆ ಪತಿ–ಪತ್ನಿಯ ನಡುವೆ ಗಲಾಟೆ ನಡೆದಿದ್ದು, ನಂತರ ತಮ್ಮ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೊಸೆಯ ಜೊತೆಗೆ ಹೊಂದಾಣಿಕೆ ಇರದ ಕಾರಣಕ್ಕೆ ಮಗ ಬೇರೆ ಮನೆ ಮಾಡಿಕೊಟ್ಟಿದ್ದ. 2021 ರಲ್ಲಿ ವೃದ್ದಾಶ್ರಮಕ್ಕೆ ತಂದೆ ತಾಯಿಯನ್ನು ಸೇರಿಸಿದ್ದ. ನಂತರ 2023ರಲ್ಲಿ ತಂದೆ ತಾಯಿಯನ್ನು ಮನೆಗೆ ಕರೆತಂದಿದ್ದ. ಮತ್ತೆ ಮನೆಯಲ್ಲಿ ಗಲಾಟೆ ಆರಂಭವಾಗಿದ್ದರಿಂದ ಕಳೆದ ತಿಂಗಳು ಬನಶಂಕರಿ ವೃದ್ಧಾಶ್ರಮಕ್ಕೆ ಸೇರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.