ಮನುಷ್ಯನು ಧರ್ಮ ಮತ್ತು ಆಧ್ಯಾತ್ಮಿಕತೆಗಳಿಂದ ಶಾಂತಿ, ಸಮಾಧಾನ ಮತ್ತು ನೆಮ್ಮದಿಯಿಂದ ಬಾಳಬೇಕು ಎಂದು ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ತಿಳಿಸಿದರು.
ಶ್ರೀಗಳು ಇದೇ ಸೆ. ೮ರಂದು ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣವಾಗಿರುವ ಬ್ಯಾಪ್ಸ್ ಸ್ವಾಮಿ ನಾರಾಯಣ ಅಕ್ಷರಧಾಮದ ಉದ್ಘಾಟನಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ‘ಸ್ಫೂರ್ತಿ ಉತ್ಸವ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು.
ಸ್ವಾಮಿ ನಾರಾಯಣ ಸಂಸ್ಥೆಯು ಧಾರ್ಮಿಕ ಕೇಂದ್ರಗಳನ್ನು ಅದ್ಭುತವಾಗಿ, ಅತ್ಯಾಧುನಿಕವಾಗಿ ನಿರ್ಮಿಸುತ್ತಿದೆ. ಇವು ಅಲ್ಲಿಗೆ ಬರುವ ಭಕ್ತಾದಿಗಳಿಗೆ ಶಾಂತಿ, ನೆಮ್ಮದಿ, ಸೌಹಾರ್ದತೆಗಳನ್ನು ನೀಡುವ ಪವಿತ್ರ ಸ್ಥಳಗಳಾಗಿವೆ. ಇಲ್ಲಿನ ದೇವಸ್ಥಾನಗಳು ಕೇವಲ ಆಚರಣೆಗಳಿಗೆ ಸೀಮಿತವಾಗಿರದೆ ಮನುಷ್ಯನ ಮನಸ್ಸಿನ ತಾಪವನ್ನು ನಿವಾರಿಸುವ ಕೇಂದ್ರಗಳಾಗಿವೆ. ದೇವಸ್ಥಾನಗಳು ಕೇವಲ ಲೌಕಿಕ ಸೌಂದರ್ಯದ ತಾಣಗಳಾಗದೇ ಮನುಷ್ಯನ ಜೀವನದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಉದ್ಭೋದಕಗೊಳಿಸುವವುಗಳಾಗಿವೆ ಎಂದರು.
ಭಕ್ತರು ಮತ್ತು ಭಗವಂತನ ನಡುವಿನ ಅನುಸಂಧಾನ ಕೇಂದ್ರಗಳಾಗಿವೆ. ಈ ಪರಂಪರೆಯ ಐದನೆಯ ಆಧ್ಯಾತ್ಮಿಕ ಗುರುಗಳಾಗಿದ್ದ ಶ್ರೀ ಪ್ರಮುಖ್ ಸ್ವಾಮಿಗಳು ಸ್ವಾಮಿ ನಾರಾಯಣ ಸಂಸ್ಥೆಯನ್ನು ಜಗದ್ವ್ಯಾಪಕವಾಗಿ ಬೆಳಸಿದರು. ಅವರ ಉತ್ತರಾಧಿಕಾರಿಗಳಾಗಿರುವ ಶ್ರೀ ಮಹಾಂತ ಸ್ವಾಮಿಗಳು ಅವರ ಆಶಯದಂತೆ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಪ್ಸ್ನ ಅಂತಾರಾಷ್ಟ್ರೀಯ ಸಂಶೋಧನಾ ವಿಭಾಗದ ಸಂಚಾಲಕರಾದ ಶ್ರೀ ಈಶ್ವರಚರಣ ಸ್ವಾಮೀಜಿಯವರು ಹಾಗೂ ಬಾಬ್ ಹೂಗಿನ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾಪ್ಸ್ನ ನೂರಾರು ಸಾಧುಗಳು, ಅಮಿತಾಬ್ ಮಿತ್ತಲ್, ಡಾ. ಸುರೇಶ್ ದೇಸಾಯಿ, ಬಲವಂತ್ ಪಟೇಲ್, ಭೌಮಿಕ್ ರೊಕಾಡಿಯಾ, ತ್ಯಾಗವಲ್ಲಭ ಸ್ವಾಮೀಜಿ, ಮೈಕೆಲ್ ಆ್ಯಡಂ, ಮಾರಿಯೋ ಚಾಮರಸ್, ಹರೀಶ್ ಗೋಯೆಲ್, ಡಾ. ಗೌತಮ್ ಷಾ, ಬಿಕ್ಕು ಪಟೇಲ್, ಚಂದು ಪಟೇಲ್ ಮೊದಲಾದವರು ಪಾಲ್ಗೊಂಡಿದ್ದರು.
ಶ್ರೀಗಳವರು ಕಾರ್ಯಕ್ರಮಕ್ಕೆ ಮೊದಲು ಅಕ್ಟೋಬರ್ನಲ್ಲಿ ಉದ್ಘಾಟನೆಯಾಗಲಿರುವ ಅಕ್ಷರಧಾಮದ ಅಂತಿಮ ಘಟ್ಟದಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು ಹಾಗೂ ಶ್ರೀ ಮಹಾಂತ ಸ್ವಾಮಿಗಳವರನ್ನು ಭೇಟಿ ಮಾಡಿ ಸರ್ವಶುಭ ಹಾರೈಸಿದರು.