ಮಂಡ್ಯ: ರೈತರ ಕೃಷಿ ಚಟುವಟಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸುವ ಹಾಗೂ ವಿದ್ಯುತ್ ವಿತರಣಾ ನಷ್ಟವನ್ನು ಕಡಿಮೆ ಮಾಡು ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ದಿಟ್ಟ ಹೆಜ್ಜೆ ಇರಿಸಿದೆ. ಈ ಸಂಬಂಧ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ಈ ಮಹತ್ವದ ಪ್ರಾಯೋಗಿಕ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು.
ನೇರಳೆಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರ ಕೃಷಿ ಪಂಪ್ಸೆಟ್ ಸಮೀಪ ಪರಿವರ್ತಕಗಳನ್ನು ಅಳವಡಿಸಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಹಾಗೂ ವಿದ್ಯುತ್ ವಿತರಣಾ ನಷ್ಟವನ್ನು ಕಡಿಮೆ ಮಾಡುವ ಪ್ರಾಯೋಗಿಕ ಯೋಜನೆಗೆ ಸ್ಥಳೀಯ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರೂ ಆಗಿರುವ ರಮೇಶ್ ಬಂಡಿಸಿದ್ದೇಗೌಡ ಹಾಗೂ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, “ರೈತರಿಗೆ ಅನುಕೂಲವಾಗುವ ಈ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ನಿಗಮದ ಎಲ್ಲಾ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ. ಈ ಯೋಜನೆ ಕೇವಲ ಒಬ್ಬ ವ್ಯಕ್ತಿಗೆ ಅನುಕೂಲವಾಗದೆ ಸ್ಥಳೀಯ ಎಲ್ಲಾ ರೈತರಿಗೆ ಅನುಕೂಲ ಕಲ್ಪಿಸಲು ಯೋಜನೆ ಅನುಷ್ಟಾನಕ್ಕೆ ತರಲಾಗಿದೆ. ಕೆಲವೇ ತಿಂಗಳಲ್ಲಿ ಸೆಸ್ಕ್ ವತಿಯಿಂದ ಕುಸುಮ್-ಸಿ ಯೋಜನೆ ಅಡಿಯಲ್ಲಿ ಸುಮಾರು 950 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿದ್ದು, ಇದಕ್ಕಾಗಿ ಅಗತ್ಯವಿರುವ ಜಾಗ ಸೇರಿದಂತೆ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ” ಎಂದರು.
ಅಲ್ಲದೇ “ರೈತರಿಗೆ ಬೆಳಗ್ಗಿನ ವೇಳೆಯೇ 7 ಗಂಟೆ ವಿದ್ಯುತ್ ನೀಡುವ ಸಲುವಾಗಿ ಕುಸುಮ್ ಸಿ ಯೋಜನೆಯಡಿ ಕ್ರಮವಹಿಸಲಾಗಿದೆ. ಯಾವುದೇ ರೈತರು ತಮ್ಮ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬಯಸಿದರೆ, ಪ್ರತಿ ಎಕರೆಗೆ ಪ್ರತಿವರ್ಷಕ್ಕೆ 25 ಸಾವಿರ ರೂ. ಬಾಡಿಗೆ ನೀಡುತ್ತೇವೆ. ಈ ವಿಚಾರವಾಗಿ ಯಾವುದೇ ರೈತರು ಮುಂದೆ ಬಂದು ಜಾಗವನ್ನು ನೀಡಿದ್ದೇ ಆದಲ್ಲಿ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.
ನವೀಕೃತ ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯಡಿ ರೈತರು ಸುಮಾರು 22,500/- ಸಾವಿರ ರೂ. ಹಣವನ್ನು ಪಾವತಿಸಿದರೆ ಅನಧಿಕೃತ ವಿದ್ಯುತ್ ಸಂಪರ್ಕ ಅಧಿಕೃತಗೊಳಿಸಲಾಗುವುದು” ಎಂದ ಅವರು, ಈ ಕಾರ್ಯಕ್ರಮವನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದನ್ನು ತಪ್ಪಿಸಿ” ಎಂದು ಹೇಳಿದರು.
ವಿದ್ಯುತ್ ವಿತರಣಾ ನಷ್ಟ ತಗ್ಗಿಸುವ ಯೋಜನೆ
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ಸೆಸ್ಕ್ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ರೈತರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಐಪಿ ಸೆಟ್ಗೆ ಒಂದು ಟ್ರ್ಯಾನ್ಸ್ಫಾರ್ಮರ್ ಹಾಕಬೇಕಿದ್ದರೂ, ಒಂದು ಟ್ರಾನ್ಸ್ಫಾರ್ಮರ್ಗೆ 7-8 ಐಪಿ ಸೆಟ್ಗಳ ಸಂಪರ್ಕ ಹೊಂದಲಾಗಿರುತ್ತದೆ. ಆದರೆ ಒಂದು ಅಥವಾ ಎರಡು ಐಪಿ ಸೆಟ್ಗೆ ಒಂದು ಟ್ರಾನ್ಸ್ಫಾರ್ಮರ್ ಹಾಕಬೇಕೆಂಬುದು ಒಳ್ಳೆಯ ಯೋಜನೆಯಾಗಿದ್ದು, ಇದನ್ನು ಮಾಡುವುದರಿಂದ ವಿದ್ಯುತ್ ವಿತರಣಾ ನಷ್ಟ ಕಡಿಮೆಯಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೆ ಆರ್ಥಿಕ ಹೊರೆಯ ಕಾರಣದಿಂದಾಗಿ ಈ ಯೋಜನೆ ಎಲ್ಲೆಡೆ ಅನುಷ್ಟಾನ ಮಾಡಲು ಸಾಧ್ಯವಿಲ್ಲ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕರುಗಳಾದ ಶರಣಮ್ಮ ಎಸ್. ಜಂಗಿನ, ಪ್ರಧಾನ ವ್ಯವಸ್ಥಾಪಕ ಎಲ್. ಲೋಕೇಶ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಅಧಿಕಾರಿಗಳು ಇದ್ದರು.
ಯೋಜನೆಯಿಂದ ರೈತರಿಗೆ ಅನುಕೂಲ:
ನೇರಳೆಕೆರೆ ಗ್ರಾಮದಲ್ಲಿ ಚಾಲನೆ ನೀಡಲಾಗಿರುವ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ಪ್ರಮುಖವಾಗಿ ರೈತರ ಐಪಿ ಸೆಟ್ಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸುವುದು, ವಿದ್ಯುತ್ ವಿತರಣಾ ನಷ್ಟವನ್ನು ಕಡಿಮೆ ಮಾಡುವುದು, ತಾಂತ್ರಿಕ ನಷ್ಟವನ್ನು ಕಡಿಮೆ ಮಾಡುವುದು, ವಿದ್ಯುತ್ ಕಳ್ಳತನ ಆಗದಂತೆ ತಡೆಯುವುದು ಸೇರಿದಂತೆ ಹೆಚ್ಚಿನ ಅನುಕೂಲವಾಗಲಿದೆ.
ಸೆಸ್ಕ್ ಅಧಿಕಾರಿಗಳು ಹಾಗೂ ಪವರ್ ಮೆನ್ಗಳು ಹೆಚ್ಚಿನ ಕೆಲಸ ಮಾಡಬೇಕು. ಪ್ರಮುಖವಾಗಿ ರೈತರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ. ಸೆಸ್ಕ್ ವತಿಯಿಂದ ನೀಡಿರುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮತ್ತು ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸುವುದು.
ಕೆ.ಎಂ. ಮುನಿಗೋಪಾಲ್ ರಾಜು, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.