ಮೈಸೂರು: ನಗರದ ಕೆ.ಆರ್. ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ವ್ಯಕ್ತಿಯೊಬ್ಬ ಹತ್ತಿ ಸಿಗರೇಟ್ ಇಡುವ ಮೂಲಕ ಅವಮಾನಕಾರಕ ಘಟನೆಗೆ ಕಾರಣನಾಗಿದ್ದಾನೆ.
ಪ್ರತಿಮೆಯ ಬಾಯಿಗೆ ಸಿಗರೇಟ್ ಇಡುವ ಮೂಲಕ ವ್ಯಕ್ತಿ ವಿಕೃತ ತೋರಿಸಿದ್ದಾನೆ. ಈ ದೃಶ್ಯ ನೋಡಿದ ಸಾರ್ವಜನಿಕರು ಆತಂಕದಿಂದ ಸ್ಥಳಕ್ಕೆ ಜಮಾಯಿಸಿದ್ದು, ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ನಡೆದ ಸಮಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಪರಾರಿಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ. ಸಾರ್ವಜನಿಕ ಆಸ್ತಿಗೆ ಅವಮಾನ ಮತ್ತು ರಾಜಕೀಯ ನಾಯಕರಿಗೆ ಮಾನಹಾನಿ ಮಾಡುವ ಈ ರೀತಿಯ ಕೃತ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಮಹಾನ್ ರಾಜರಾಗಿದ್ದು, ಅವರ ಪ್ರತಿಮೆಯ ಅವಮಾನವು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಜನತೆ ಕೃತ್ಯಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.