Tuesday, December 2, 2025
Google search engine

Homeಬ್ರೇಕಿಂಗ್ ನ್ಯೂಸ್ರಾಜಕೀಯ ಶಾಶ್ವತ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ : ಸಿಎಂ ಸಿದ್ದರಾಮಯ್ಯ

ರಾಜಕೀಯ ಶಾಶ್ವತ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್​​ ಸರ್ಕಾರದಲ್ಲಿ ಪವರ್​​ ಶೇರಿಂಗ್​ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ಬಣ ಎಂಬಂತೆ ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬ್ರೇಕ್​ ಫಾಸ್ಟ್​ ಮೀಟಿಂಗ್​ಗಳು ಕೂಡ ಸದ್ದು ಮಾಡುತ್ತಿದ್ದು, ಇತ್ತ ಸಿಎಂ ಸಿದ್ದರಾಮಯ್ಯ ರಾಜಕೀಯ ಶಾಶ್ವತ ಅಲ್ಲ ಎನ್ನುವ ಮೂಲಕ ಬೇಸರದ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.

ವಿಧಾನಸೌಧದಲ್ಲಿ ನಡೆದ ಒಂದು ಸಣ್ಣ ಸಂಭಾಷಣೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಹಾಸನ ಜಿಲ್ಲೆಯ ಹಳೇಬೀಡು ಶಾಸಕ ಬೇಳೂರು ಗೋಪಾಲಕೃಷ್ಣ ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿಯಾಗಿ ಮಾತನಾಡಿಸಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಆಡಿರುವ ಮಾತು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ವೇಳೆ ಸಭೆ ಮುಗಿಸಿ ಹೊರಬರುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಅಡ್ಡ ನಿಂತ ಬೇಳೂರು ಗೋಪಾಲಕೃಷ್ಣ, ಮೊದಲು ಹಾಸ್ಯದ ಲಹರಿಯಲ್ಲಿ ನಾಟಿ ಕೋಳಿ ಸಾಂಬಾರ್ ಹೇಗಿತ್ತು ಸಾರ್? ಎಂದು ಪ್ರಶ್ನಿಸಿದ್ದಾರೆ. ಆದರೆ ಸಿಎಂ ಅವರ ಉತ್ತರ ಸಂಪೂರ್ಣ ಗಂಭೀರವಾಗಿದ್ದು, ರಾಜಕೀಯ ಶಾಶ್ವತ ಅಲ್ಲ ಗೋಪಾಲಕೃಷ್ಣ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕೀಯ ನಮ್ಮಪ್ಪನ ಆಸ್ತಿಯಾ? ಏನ್ ಆಗುತ್ತೋ ಆಗಲಿ ಎಂದು ಸಿಎಂ ಅಚ್ಚರಿ ಮಾತುಗಳನ್ನಾಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ಮಾಡುತ್ತಿರುವ ಬೇಳೂರು ಗೋಪಾಲಕೃಷ್ಣ ದೆಹಲಿಯಲ್ಲಿಯೂ ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ಆದರೆ ಸಿಎಂ ಅವರ ಈ ಮಾತುಗಳು ಸಚಿವ ಸ್ಥಾನ ಖಾತರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನೇ ನೀಡಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗೀಡಾಗುತ್ತಿದೆ.. ನಾನು ಯಾವತ್ತೂ ಯೋಚನೆ ಮಾಡಿ ಗೊತ್ತಿಲ್ಲ. ಏನ್ ಆಗುತ್ತೋ ಆಗಲಿ ಎಂಬ ಸಿಎಂ ಅವರ ಮಾತುಗಳು ಕೇವಲ ಬೇಳೂರಿಗಲ್ಲ, ಪಕ್ಷದೊಳಗಿನ ಎಲ್ಲ ಸಚಿವ ಸ್ಥಾನ ಆಕಾಂಕ್ಷಿಗಳಿಗೂ ಮತ್ತು ತಮ್ಮ ಸಿಎಂ ಕುರ್ಚಿ ವಿಚಾರವಾಗಿಯೂ ಒಂದು ಎಚ್ಚರಿಕೆಯ ಸಂದೇಶವಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಡಿಕೆಶಿ ಮನೆಯಲ್ಲಿ ನಡೆದ ಬ್ರೇಕ್‌ಫಾಸ್ಟ್ ಭೇಟಿ, ಅಧಿಕಾರ ಹಂಚಿಕೆ ಯುದ್ಧ, ದೆಹಲಿಯಲ್ಲಿ ನಡೆಯುತ್ತಿರುವ ಸಭೆಗಳು ಎಲ್ಲದರ ನಡುವೆಯೂ ಸಿಎಂ ಸಿದ್ದರಾಮಯ್ಯ ಹೈಕಮಾಂಡ್​ ಮಾತೇ ಅಂತಿಮ ಎಂದು ಹೇಳುತ್ತಿದ್ದರು. ಇದೀಗ ಮತ್ತೆ ಅಚ್ಚರಿ ಹೇಳಿಕೆ ಕೊಟ್ಟ ಸಿಎಂ ಏನ್ ಆಗುತ್ತೋ ಆಗಲಿ, ನಾನು ತಲೆ ಕಡೆಸಿಕೊಳ್ಳುವುದಿಲ್ಲ, ರಾಜಕೀಯ ಶಾಶ್ವತ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ರಾಜಕೀಯದಲ್ಲಿ 40 ವರ್ಷಗಳ ಅನುಭವವಿರುವ ಸಿದ್ದರಾಮಯ್ಯ ಈ ಹಿಂದೆಯೂ ನಾನು ರಾಜಕೀಯಕ್ಕೆ ಶಾಶ್ವತನಲ್ಲ, ರಾಜಕೀಯ ನನ್ನನ್ನು ಶಾಶ್ವತವಾಗಿ ಬಿಟ್ಟಿಲ್ಲ ಎಂಬ ಮಾತುಗಳನ್ನು ಹಲವು ಬಾರಿ ಹೇಳಿದ್ದರು. ಈ ಬಾರಿ ಬೇಳೂರಿಗೆ ನೇರವಾಗಿ ಹೇಳಿರುವುದು ಪಕ್ಷದೊಳಗೆ ದೊಡ್ಡ ಸಂದೇಶವಾಗಿದೆ. ಆದರೆ ಪಕ್ಷದೊಳಗೆ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರಾ? ಎಂಬ ಚರ್ಚೆ ಆರಂಭವಾಗಿದ್ದು, ರಾಜಕೀಯ ಶಾಶ್ವತ ಅಲ್ಲ, ಆದರೆ ಸಿಎಂ ಅವರ ಈ ಮಾತುಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಶಾಶ್ವತ ಚರ್ಚೆಗೆ ಕಾರಣವಾಗಲಿವೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular