ಗುಂಡ್ಲುಪೇಟೆ: ಹಂದಿ ಬೇಟೆಯಾಡಿ ಅಕ್ರಮವಾಗಿ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿರುವ ಘಟನೆ ಪಟ್ಟಣದ ಶಿವಾನಂದ ಸ್ಮಾರಕದ ಬಳಿ ನಡೆದಿದೆ.
ಅಕ್ಷಯ್, ಸುರೇಶ್, ಸುಧೀರ್ ಕುಮಾರ್, ಮಲ್ಲೇಶ್, ನಂದಕುಮಾರ್, ಗುರುಮೂರ್ತಿ, ವಿದ್ವಾನ್ ಬಂಧಿತ ಆರೋಪಿಗಳು. ಇವರು ಕೊತ್ತಲವಾಡಿ ಗ್ರಾಮದ ಎಲ್ಲೆ ಯಾನಗಹಳ್ಳಿ ರಸ್ತೆಯ ಜಮೀನಿನಲ್ಲಿ ಅಕ್ರಮವಾಗಿ ನಾಡ ಬಂದೂಕುಗಳಿಂದ ಗುಂಡು ಹಾರಿಸಿ ಕಾಡುಹಂದಿಯನ್ನು ಬೇಟೆಯಾಡಿ ಕೊಂದು ಮಾಂಸವನ್ನು ಕತ್ತರಿಸಿ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಇನ್ಸ್ ಪೆಕ್ಟರ್ ಮಂಜುನಾಥ್ ನಾಯಕ ನೀಡಿದ ಮೇರೆಗೆ ಗುಂಡ್ಲುಪೇಟೆ ಶಿವಾನಂದ ಸ್ಮಾರಕದ ಬಳಿ ಗುಂಡ್ಲುಪೇಟೆ ಸಬ್ ಇನ್ಸ್ ಪೆಕ್ಟರ್ ಕಿರಣ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಾಡು ಹಂದಿ ಮಾಂಸ, ಮೂರು ನಾಡ ಬಂದೂಕು, ಎರಡು ಕಬ್ಬಿಣದ ಮಚ್ಚುಗಳ ಸಮೇತ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಧೀಶರ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.