ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆ ರದ್ದೂಗೊಳಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಕಾರ್ಮಿಕರ ಮುಷ್ಕರವನ್ನು ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲಿಸಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಇಂದು ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ಸಂಹಿತೆ ಜಾರಿ ಮಾಡಿ ಕಾರ್ಮಿಕರ ಕಾನೂನುಗಳನ್ನು ಶೈತ್ಯಾಗಾರದಲ್ಲಿ ಇಟ್ಟಿದೆ. ಕಾರ್ಮಿಕರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ ದೇಶದ ದುಡಿಯುವ ಜನರು ಒಂದಾಗಿ ಕಾರ್ಮಿಕ ಸಂಹಿತೆಯನ್ನು ವಿರೋಧಿಸಬೇಕಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ಕೇಂದ್ರವನ್ನಾಳುವ ನರೇಂದ್ರ ಮೋದಿ ಸರಕಾರ ಕಾಪೋರೇಟ್ ಕಂಪೆನಿಗಳ ಅಡಿಯಾಳಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಿ ಕಾರ್ಮಿಕರ ಹಿತವನ್ನು ಬಲಿ ಕೊಡುತ್ತಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಖಜಾಂಜಿ ಶಮೀರ್ ಬೋಳಿಯಾರ್, ಪ್ರಮುಖರಾದ ಮಜೀದ್ ಉಳ್ಳಾಲಬೈಲ್, ಮೋಹನ್ ಕುಂಪಲ, ಅನಿಲ್, ಪದ್ಮನಾಭ, ಸಿದ್ದಿಕ್ ಬೆಂಗ್ರೆ, ಸಿರಾಜ್,ಶರಣಪ್ಪ, ಬಷೀರ್ ಪಾವೂರ್, ಮುಂತಾದವರು ಉಪಸ್ಥಿತರಿದ್ದರು.
ಫೆಬ್ರವರಿ 12 ಹಳೆ ಬಂದರು ಸಗಟು ಮಾರುಕಟ್ಟೆ ಬಂದ್
ಅಖಿಲ ಭಾರತ ಕಾರ್ಮಿಕರ ಮುಷ್ಕರದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಯಾವುದೇ ಲೋಡಿಂಗ್, ಆನ್ ಲೋಡಿಂಗ್ ಕೆಲಸಗಳು ನಡೆಯದೆ ಸಗಟು ಮಾರುಕಟ್ಟೆ ವ್ಯವಹಾರದಲ್ಲಿ ವ್ಯತ್ಯಯ ಆಗಲಿದ್ದು ಲಾರಿ, ಟೆಂಪೋ ಮಾಲಕರು ಬಂದರಿನ ವರ್ತಕರು, ಗ್ರಾಹಕರು ಸಹಕರಿಸುವಂತೆ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್ ಕೋರಿದ್ದಾರೆ.
- ಮಂಗಳೂರುನಿಂದ ಶಂಶೀರ್ ಬುಡೋಳಿ



