ಯಾದಗಿರಿ : ಇಂದು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿದ್ದು, ರಾಜ್ಯದ ಕೆಲವು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದ್ದು, ಹಲವು ಖಾತೆ ಬದಲಾವಣೆಯಾಗುವ ನಿರೀಕ್ಷೆಯಿದೆ. ಇದೇ ವಿಚಾರವಾಗಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ 10 ರಿಂದ 15 ಸಚಿವರು ಬದಲಾವಣೆ ಆದರೂ ಆಗಬಹುದು ಎಂದು ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ.
ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಯಾಕೆ ಕರೆದಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ. ಆದರೆ 10ರಿಂದ 15 ಜನರ ಬದಲಾವಣೆಯಾದರೂ ಆಗಬಹುದು.
ಜನರ ತೀರ್ಮಾನದಂತೆ ಸಚಿವ ಸಂಪುಟ ವಿಸ್ತರಣೆ ಆಗಲ್ಲ ಎಲ್ಲವನ್ನು ಪಕ್ಷದ ಹೈಕಮಾಂಡ ತೀರ್ಮಾನ ಮಾಡುತ್ತದೆ. ಸಚಿವ ಸ್ಥಾನ ನೀಡುವುದೇ ಆದರೆ 34 ಕ್ಕಿಂತ ಹೆಚ್ಚಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗಲ್ಲ. ಸಚಿವ ಸ್ಥಾನ ಯಾರಿಗೆ ನೀಡಬೇಕು ಅನ್ನೋದರ ಕುರಿತು ಸಿಎಂ ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ ಎಂದು ಶರಣಬಸಪ್ಪ ದರ್ಶನಾಪುರ ಹೇಳಿಕೆ ನೀಡಿದರು.